Govindrajnagar : ಹೈಟೆಕ್ ಉದ್ಯಾನವನ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಪರೇಟರ್ ಹಾಗೂ ಕಾಂಗ್ರೆಸ್ ಶಾಸಕರ ಬೆಂಬಲಿಗರ ನಡುವೆ ವಾಗ್ವಾದಕ್ಕೆ ಕಾರಣವಾಗಿ ಪಾರ್ಕ್ ಸುತ್ತ ನಿಷೇಧಾಜ್ನೆ ಜಾರಿಗೊಳಿಸಿರುವ ಘಟನೆ ಬೆಂಗಳೂರಿನ ನಾಗರಬಾವಿಯಲ್ಲಿ ನಡೆದಿದೆ.
ನಾಗರಬಾವಿಯಲ್ಲಿನ ಚಂದ್ರಗಿರಿ ಪಾರ್ಕ್ ಉದ್ಘಾಟನಾ ಸಮಾರಂಭವನ್ನು ಆ.31ರಂದು ಕಾರ್ಪರೇಟರ್ ಉಮೇಶ್ ಶೆಟ್ಟಿ ಏರ್ಪಡಿಸಿದ್ದರು. ಅಲ್ಲದೇ ಉದ್ಯಾನವನದಲ್ಲಿ ಉದ್ಘಾಟನಾ ಸಮಾರಂಭಕ್ಕಾಗಿ ತಯಾರಿ ಕೂಡ ನಡೆದಿತ್ತು. ಆದರೆ ಶಾಸಕ ಪ್ರಿಯಕೃಷ್ಣ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದೇ ಕಾರಣಕ್ಕೆ ಉದ್ಘಾಟನಾ ಸಮಾರಂಭವನ್ನು ರದ್ದುಮಾಡಲಾಗಿದೆ. ಇದು ಉಭಯ ನಾಯಕರ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಬಿಗಿ ಭದ್ರತೆಗಾಗಿ ಸುತ್ತಮುತ್ತಲೂ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೇ ಕಾರ್ಪರೇಟರ್ ರವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಬಿಎಂಪಿಯಿಂದ ಪಾರ್ಕ್ ಉದ್ಘಾಟನೆ ಮಾಡುತ್ತಿರಲಿಲ್ಲ, ಇದೊಂದು ಪಕ್ಷದ ಕಾರ್ಯಕ್ರಮವಾಗಿ ನಡೆಸಲಾಗುತ್ತಿದೆ. ಅಲ್ಲದೇ ಕಾರ್ಯಕ್ರಮದ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡಿಲ್ಲ, ಆಹ್ವಾನವನ್ನೂ ನೀಡಿಲ್ಲ, ನಾವು ಯಾವುದೇ ಅಡ್ಡಿ, ತೊಂದರೆಯನ್ನೂ ಮಾಡಿಲ್ಲ ಎಂದು ಪ್ರಿಯಕೃಷ್ಣ ತಿಳಿಸಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಪರೇಟರ್, ಬಿಬಿಎಂಪಿ ವತಿಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ ಈ ಪಾರ್ಕ್ ನಿರ್ಮಿಸಿದ್ದೇವೆ. ಪಾರ್ಕ್ ಉದ್ಘಾಟನೆ ಸಮಾರಂಭ ನಡೆಸಲು ಶಾಸಕರ ಅನುಮತಿಯನ್ನೂ ಕೇಳಿದ್ದೆವು , ಅದಕ್ಕೆ ಅವರು ಒಪ್ಪಿದ್ದರು. ಆದರೆ ಈಗ ಏಕಾಏಕಿ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.