ಬೆಂಗಳೂರು : ತಡರಾತ್ರಿ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಮತ್ತು ತೊಗಾಡಿಯಾ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ತೊಗಾಡಿಯಾ ತಡರಾತ್ರಿ ಬೆಂಗಳೂರು ನಗರ ಪ್ರವೇಶಿಸಲು ಮುಂದಾದಾಗ ಪೊಲೀಸರು ಅವರನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧ ತೊಗಾಡಿಯಾ ಕೆಂಡಮಂಡಲವಾಗಿದ್ದಾರೆ. ಹೈಕೋರ್ಟ್ ಆದೇಶ ಪಾಲಿಸಿದ್ದೇನೆ. ನಾನು ನಗರ ಪ್ರವೇಶ ಮಾಡಿಲ್ಲ. ಆದರೂ ಪೊಲೀಸರು ಏಕೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪೊಲೀಸರು ಹಾಗೂ ತೊಗಾಡಿಯಾ ನಡುವೆ ಒಂದು ಗಂಟೆಗೂ ಹೆಚ್ಚು ಕಾಲ ವಾಗ್ವಾದ ನಡೆದಿದ್ದು, ತೊಗಾಡಿಯಾ ರಸ್ತೆ ಮಧ್ಯೆಯೇ ಕುಳಿತು ಧರಣಿ ನಡೆಸಿದರು. ಅರ್ಧ ಗಂಟೆ ಪ್ರತಿಭಟನೆ ನಡೆಸಿದ ಅವರು ಬಳಿಕ ಅಹಮದಾಬಾದ್ ಗೆ ತೆರಳಿದರು ಎಂದು ತಿಳಿದುಬಂದಿದೆ.
ಹಿಂದೂ ಸಮಾಜೋತ್ಸವಕ್ಕೆ ಇಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಬೇಕಾಗಿದ್ದ ಅವರನ್ನು ಪೊಲೀಸರು ನಿರ್ಬಂಧಿಸಿದ್ದರು. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದ ಅವರಿಗೆ ಅಲ್ಲಿ ಜಯ ಸಿಗಲಿಲ್ಲ.
ಫೆ.7ರಂದು ಅವರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಕರ್ನಾಟಕದ ಗಡಿ ಹೊಸೂರಿನ ಸಮೀಪ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾರ್ಯಕ್ರಮ ಮುಗಿದಿದ್ದರೂ ಹಿಂತಿರುಗಿರಲಿಲ್ಲ. ನಗರ ಪ್ರವೇಶ ಮಾಡಬಹುದೆಂದು ಪೊಲೀಸರಿಗೆ ಅನುಮಾನವಿತ್ತು. ಅವರ ಚಲನವಲನಗಳ ಮೇಲೆ ಗಮನವಿರಿಸಿದ್ದರು. ತಡರಾತ್ರಿ ಅವರ ಬಳಿ ಹೋದಾಗ ನನ್ನನ್ನು ಬಂಧಿಸಲು ಬಂದಿದ್ದಾರೆಂದು ಪೊಲೀಸರ ವಿರುದ್ಧ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ತೊಗಾಡಿಯಾ ನಡುವೆ ಮಾತಿನ ಚಕಮಕಿ ನಡೆದಿದೆ. ನಾನು ನಗರ ಪ್ರವೇಶ ಮಾಡುವುದಿಲ್ಲ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಪೊಲೀಸರೇ ಅವರನ್ನು ಕರೆದೊಯ್ದು ವಿಮಾನ ನಿಲ್ದಾಣ ತಲುಪಿಸಿ ಕಳುಹಿಸಿದ್ದಾರೆ.