ನವದೆಹಲಿ : ಬೆಂಗಳೂರು ಸರಣಿ ಬಾಂಬ್ ಸ್ಪೋಟದ ರೂವಾರಿ ನಾಸೀರ್ ಮದನಿ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಿ ಸುಪ್ರಿಂ ಕೋರ್ಟ್ ಆದೇಶ ನೀಡಿದೆ.
2008ರ ಬೆಂಗಳೂರು ಸರಣಿ ಬಾಂಬ್ ಸ್ಪೋಟದ ರೂವಾರಿ ಅಬ್ದುಲ್ ನಾಸಿರುದ್ದೀನ್ ಮದನಿಗೆ ಅನಾರೋಗ್ಯ ನಿಮಿತ್ತ ಸುಪ್ರೀಂ ಕೋರ್ಟ್ ಜು.11ರಂದು ಷರತ್ತುಬದ್ಧ ಜಾಮೀನು ನೀಡಿತ್ತು. ಜಾಮೀನಿನ ಅವಧಿ ಆ.11ಕ್ಕೆ ಮುಕ್ತಾಯವಾದ ಹಿನ್ನಲೆಯಲ್ಲಿ ಮತ್ತೆ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ಎರಡು ವಾರಗಳ ಕಾಲ ನ್ಯಾಯಾಲಯ ಜಾಮೀನು ಅವಧಿ ವಿಸ್ತರಿಸಿದೆ.
ವಿಚಾರಣೆ ವೇಳೆ ಮದನಿ ಅನಾರೋಗ್ಯದ ವಿರುದ್ಧ ಅಫಿಡವಿಟ್ ಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡುವಂತೆ ಕರ್ನಾಟಕ ಪರ ವಕೀಲರು ಕೋರಿದರು. ಕರ್ನಾಟಕ ಕಾಲಾವಕಾಶ ಕೋರಿದ ಹಿನ್ನಲೆಯಲ್ಲಿ ಎರಡುವಾರಗಳಕಾಲ ಮದನಿ ಜಾಮೀನು ವಿಸ್ತರಣೆ ಮಾಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಈ ವೇಳೆ ಮದನಿ ಸಾಕ್ಷಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಕರ್ನಾಟಕ ಪರವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದರ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಹೀಗಾಗಿ ಈ ಬಗ್ಗೆ ಮಾತನಾಡುವುದಿಲ್ಲ ಎಂದು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಅಬ್ದುಲ್ ನಾಸೀರ್ ಮದನಿ 2008 ಜುಲೈ 25ರಂದು ಬೆಂಗಳೂರಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೊಟದ ಪ್ರಮುಖ ಆರೋಪಿಯಾಗಿದ್ದು, 2010ರಂದು ಬೆಂಗಳೂರು ಪೊಲೀಸರು ಕೇರಳದಲ್ಲಿ ಬಂಧಿಸಿದ್ದರು. ಬೆಂಗಳೂರಿನ 9ಕಡೆಗಳಲ್ಲಿ ಸರಣಿ ಸ್ಪೋಟಗಳನ್ನು ನಡೆಸಿದ್ದು, ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. 20ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. 1998ರ ಕೊಯಮತ್ತೂರಿನ ಸ್ಪೊಟ ಪ್ರಕರಣದ ರೂವಾರಿಯೂ ಆಗಿರುವ ಈತ ಆಪ್ರಕರಣದಲ್ಲಿ ಖುಲಾಸೆಗೊಂಡಿದ್ದ. ಅಲ್ಲದೇ ಇನ್ನೂ ಹಲವು ಪ್ರಕರಣಗಲ್ಲಿ ಆತನಿಗೆ ಜಾಮೀನು ನೀಡಲಾಗಿತ್ತು. ಆದರೆ ಬೆಂಗಳೂರು ಸ್ಪೋಟ ಪ್ರಕರಣದಲ್ಲಿ ಆತನಿಗೆ ಜಾಮೀನು ಸಿಕ್ಕಿರಲಿಲ್ಲ. ಕೊಟ್ಟಕ್ಕಲ್ ಆರ್ಯ ವೈದ್ಯಶಾಲೆ, ಮಣಿಪಾಲ್ ಹಾಸ್ಪಿಟಲ್ ಮೊದಲಾದೆಡೆ ಆತನಿಗೆ ಚಿಕಿತ್ಸೆ ನೀಡಲಾಗಿತ್ತು.