ಧಾರವಾಡ : ಮಹಾದಾಯಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪಿನ ಬಳಿಕ ನಡೆದ ಗಲಭೆ ಪ್ರಕರಣದಲ್ಲಿ ಬಂಧಿತರಾಗಿದ್ದ 179 ಮಂದಿ ರೈತರಿಗೆ ಧಾರವಾಡ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಶ್ರೀಶಾನಂದ ಅವರು, ಬಂಧಿತ ರೈತರು ತಲಾ 50 ಸಾವಿರ ರೂ.ಬಾಂಡ್ ನೀಡಬೇಕು. ಪ್ರತಿ ಸೋಮವಾರ ಧಾರವಾಡ ಜಿಲ್ಲೆಯ ನವಲಗುಂದ ಠಾಣೆಗೆ ಹಾಜರಾಗಬೇಕು, ಸಾಕ್ಷಿ ನಾಶ ಮಾಡಬಾರದು, ಶಾಂತಿಭಂಗ ಮಾಡಬಾರದು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.
ಮಹದಾಯಿ ಮಧ್ಯಂತರ ತೀರ್ಪಿನ ಬಳಿಕ ನಡೆದ ಗಲಭೆಗಳಲ್ಲಿ 25 ಪ್ರಕರಣಗಳಡಿ 187 ರೈತರ ಬಂಧನವಾಗಿತ್ತು. ಇದರಲ್ಲಿ 8 ಜನರಿಗೆ 2 ದಿನಗಳ ಹಿಂದೆ ಜಾಮೀನು ದೊರಕಿತ್ತು. ಬಂಧಿತರ ಪರ ವಕೀಲರ ಸಂಘ ಜಾಮೀನು ಅರ್ಜಿ ಸಲ್ಲಿಸಿತ್ತು. ಗುರುವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಂತೆ ಸರ್ಕಾರಿ ಅಭಿಯೋಜಕರು ತಕರಾರು ಸಲ್ಲಿಸದೇ ಇರುವುದರಿಂದ ಬಂಧಿತ ರೈತರಿಗೆ ಇಂದೇ ಬಿಡುಗಡೆ ಸಿಗುವುದು ಬಹುತೇಕ ಖಚಿತವಾಗಿದೆ.