ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಸುಭಾಷ್ ಚಂದ್ರ ಬೋಸ್, ಬಹುಜನ ಸಮಾಜ ಪಕ್ಷದ ಸ್ಥಾಪಕ ಕಾನ್ಶಿ ರಾಮ್ ಸೇರಿ ನಾಲ್ವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರ 'ಭಾರತ ರತ್ನ' ಪದಕಗಳನ್ನು ತಯಾರಿಸಿಕೊಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ನರೇಂದ್ರ ಮೋದಿ ಸರ್ಕಾರ ಕೇಳಿದೆ.
ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್, ಶಿಕ್ಷಣ ತಜ್ಞ ಮದನ್ ಮೋಹನ್ ಮಾಳವಿಯ, ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಹಾಗೂ ಬಿ.ಎಸ್.ಪಿ. ಪಕ್ಷದ ಸ್ಥಾಪಕ ಕಾನ್ಶಿರಾಂ ಅವರಿಗೂ ಭಾರತ ರತ್ನ ಪ್ರಶಸ್ತಿ ಮರಣೋತ್ತರವಾಗಿ ಲಭಿಸುವ ಸೂಚನೆ ಸಿಕ್ಕಿದೆ. ಕಳೆದ ವಾರಾಂಭದಲ್ಲಿ ಕೇಂದ್ರ ಗೃಹ ಸಚಿವಾಲಯ ರಿಸರ್ವ್ ಬ್ಯಾಂಕ್ ಎದುರು ಐದು ಭಾರತ ರತ್ನ ಪದಕಗಳಿಗೆ ಬೇಡಿಕೆ ಇಟ್ಟಿದೆ ಎಂದು ರಾಷ್ಟ್ರೀಯ ದಿನಪತ್ರಿಕೆಯೊಂದು ವರದಿ ಮಾಡಿದೆ.
ಇದರಿಂದಾಗಿ ಈ ವರ್ಷ ಒಬ್ಬರಿಗಿಂತ ಹೆಚ್ಚು ಮಂದಿಗೆ ಭಾರತ ರತ್ನ ಸಿಗಬಹುದು, ಈ ಕುರಿತು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಅಥವಾ ನಂತರ ಘೋಷಣೆ ಹೊರಬೀಳಬಹುದು ಎನ್ನಲಾಗಿದೆ. ಹಿಂದೂ ಪುರಾಣಕತೆಗಳನ್ನು ಜನಪ್ರಿಯಗೊಳಿಸಿದ ಗೀತಾ ಪ್ರಸ್ನ ಸಂಸ್ಥಾಪಕ ಹನುಮಾನ್ ಪ್ರಸಾದ್ ಪೊದ್ದಾರ್, ಪ್ರಸಿದ್ಧ ಕಲಾವಿದ ರಾಜಾ ರವಿ ವರ್ಮಾ, ಬಿ.ಎಸ್.ಪಿ ಸಂಸ್ಥಾಪಕ ಕಾನ್ಶಿರಾಮ್ ಅವರಿಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆಗಳಿವೆ.
1992ರಲ್ಲಿ ಸುಭಾಷ್ ಚಂದ್ರ ಬೋಸ್ ಅವರಿಗೆ ಮರಣೋತ್ತರವಾಗಿ ಭಾರತ್ ರತ್ನ ಪ್ರಶಸ್ತಿ ನೀಡಲು ಅಂದಿನ ಕಾಂಗ್ರೆಸ್ ಸರ್ಕಾರ ನಿರ್ಧರಿಸಿತ್ತು. ಅದರೆ, ನೇತಾಜಿ ಅವರ ಸಾವಿನ ನಿಗೂಢತೆ ಇನ್ನೂ ಬಯಲಾಗದ ಕಾರಣ ಮರಣೋತ್ತರ ಪ್ರಶಸ್ತಿ ಘೋಷಣೆ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ನೇತಾಜಿ ಕುಟುಂಬದವರು ಪ್ರಶಸ್ತಿ ಸ್ವೀಕರಿಸಲು ಸಿದ್ದವಿಲ್ಲ ಎಂಬ ಹೇಳಿದ್ದರು. ಸಚಿನ್ ಆಟಕ್ಕೆ ಮಾರುಹೋಗಿದ್ದ ರಾಹುಲ್ ಗಾಂಧಿ ಧ್ಯಾನ್ ಚಂದ್ ಅವರ ಬದಲು ಸಚಿನ್ ಗೆ ಭಾರತ ರತ್ನ ಕೊಡಿಸಿದ್ದರು.
ಪ್ರಧಾನಿ ಮೋದಿ ಅವರು ಸುಭಾಷ್ ಚಂದ್ರ ಬೋಸ್ ಅವರ ಅಭಿಮಾನಿಯಾಗಿದ್ದು, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಹಾಗೂ ಬಿಜೆಪಿ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ ಸುಭಾಷ್ ಚಂದ್ರ ಬೋಸ್ ಅವರಿಗೆ ಭಾರತ ರತ್ನ ಪ್ರಶಸ್ಥಿ ನೀಡುತ್ತಿರುವುದರ ಬಗ್ಗೆ ದೇಶಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಭಾರತದ ಸ್ವಾತಂತ್ರಕ್ಕಾಗಿ ಜೀವವನ್ನೇ ತೆತ್ತು ಹೋರಾಡಿದ ಮಹಾನ್ ಚೇತನ ಬೋಸ್ ಅವರಿಗೆ ಭಾರತ ರತ್ನ ಕೊಡಲು ಈ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಹಿಂದೇಟು ಹಾಕಿದ್ದರ ಬಗ್ಗೆ ದೇಶಾಭಿಮಾನಿಗಳಿಗೆ ಅಸಮಾಧಾನವಿದ್ದರೂ ಬಿಜೆಪಿ ಸರ್ಕಾರವಾದರೂ ಅವರನ್ನು ಗೌರವಿಸುತ್ತಿರುವುದರ ಬಗ್ಗೆ ಸಂತಸ ಪಡುತ್ತಿದ್ದಾರೆ.