courtesy-HT
ನರೇಂದ್ರ ಮೋದಿ ಪ್ರಧಾನಿ ಆಗುತ್ತಿದ್ದಂತೆ ಸಾರ್ಕ್ ರಾಷ್ಟ್ರಗಳ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ಪ್ರಯತ್ನ ಆರಂಭವಾಗಿತ್ತು. ಈಗ ಇದರ ಮುಂದುವರಿದ ಭಾಗವಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವಿನ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಭಾರತ ಹೆಜ್ಜೆ ಇರಿಸಿದೆ.
ಮುಂದಿನ ಅಕ್ಟೋಬರ್ ತಿಂಗಳಿಂದ ಮಣಿಪುರದ ಇಂಫಾಲದಿಂದ ಸೆಂಟ್ರಲ್ ಮ್ಯಾನ್ಮಾರ್ ನ ಮಂಡಲೇ ನಡುವೆ ಬಸ್ ಸಂಚಾರ ಆರಂಭಿಸುವ ಚಿಂತನೆ ನಡೆದಿದೆ. ಈ ಬಸ್ ವಾರಕ್ಕೊಂದು ಸಲ ಸಂಚರಿಸುವ ಸಾಧ್ಯತೆ ಇದೆ. ಮಂಡಲೇ ಮತ್ತು ಇಂಫಾಲ ನಡುವೆ 579 ಕಿ.ಮೀ. ದೂರ ಇದ್ದು, ಒಟ್ಟು 14 ತಾಸುಗಳ ಪ್ರಯಾಣ ಇದಾಗಬಹುದು ಎಂದು ಅಂದಾಜಿಸಲಾಗಿದೆ.
ಸರ್ಕಾರಿ ಮೂಲಗಳ ಪ್ರಕಾರ, ಪ್ರಯಾಣ ದರ 2000 ರೂ.ಗಳಿಗಿಂತ ಕಡಿಮೆ ಇರಬಹುದು. ಉಭಯ ದೇಶಗಳಲ್ಲಿ ವೀಸಾ ಆನ್ ಅರೈವಲ್ ಸೌಲಭ್ಯ ಬಳಸಿ ವ್ಯವಹಾರ ನಿಮಿತ್ತ ಗಡಿ ದಾಟುವವರಿಗೆ ಅನುವು ಮಾಡಿಕೊಡುವುದು ಇದರ ಉದ್ದೇಶ.
ಪ್ರಸ್ತುತ ಭಾರತ ಹಾಗೂ ಮ್ಯಾನ್ಮಾರ್ ನಡುವೆ ಯಾವುದೇ ರಸ್ತೆ ಸಂಪರ್ಕವಿಲ್ಲ. ಈಗ ಇರುವ ವ್ಯವಸ್ಥೆ ಅಡಿ ಯಾರಾದರೂ ದೆಹಲಿಯಿಂದ ಮ್ಯಾನ್ಮಾರಿಗೆ ಹೋಗಬೇಕಾದಲ್ಲಿ ಮೊದಲು ಬ್ಯಾಂಕಾಕ್ ತೆರಳಿ ಅಲ್ಲಿಂದ ರಂಗೂನ್ ಅಥವಾ ನೇ ಪಿ ತಾ ಮೂಲಕ ಮ್ಯಾನ್ಮಾರ್ ಗೆ ಹೋಗಬೇಕು.
ಎರಡು ವರ್ಷಗಳ ಹಳೆಯ ಯೋಜನೆ ಇದಾಗಿದ್ದು, ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಎಂಒಯುಗೆ ಸಹಿ ಹಾಕಿದ್ದರು. ಈಗ ಮೋದಿ ಸರ್ಕಾರ ತ್ವರಿತಗತಿಯಲ್ಲಿ ಇದನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಇದು ಸಾಧ್ಯವಾದಲ್ಲಿ ಉಭಯ ದೇಶಗಳ ನಡುವಿನ ಆರ್ಥಿಕ ಚಟುವಟಿಕೆ ಹೆಚ್ಚಾಗಲಿದೆ.
ಈಗಾಗಲೇ ರಸ್ತೆ ಸಚಿವಾಲಯದ ಅಧಿಕಾರಿಗಳ ತಂಡ ಈ ತಿಂಗಳ ಆರಂಭದಲ್ಲಿ ಮ್ಯಾನ್ಮಾರ್ ಗೆ ಭೇಟಿ ನೀಡಿದ್ದು, ಶೀಘ್ರವೇ ಈ ಸಂಬಂಧ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಲಿವೆ. ಮ್ಯಾನ್ಮಾರ್ ಭಾಗದಲ್ಲಿರುವ 70 ಕಿ,ಮೀ. ರಸ್ತೆ ಮೇಲ್ದರ್ಜೆಗೆ ಏರಿಸಲು ಭಾರತ ನೆರವು ನೀಡಲಿದೆ. ಈ ಮೂಲಕ ದಕ್ಷಿಣ ಏಷ್ಯಾ ಭಾಗದಲ್ಲಿ ತನ್ನ ನೆಲೆಯನ್ನು ಭದ್ರಗೊಳಿಸುವ ಕೆಲಸವನ್ನು ಭಾರತ ಮಾಡಲಾರಂಭಿಸಿದೆ. ಏಕ ಪಕ್ಷದ ಸರ್ಕಾರ ಬಹುಮತ ಪಡದು ಅಧಿಕಾರಕ್ಕೇರಿದರೆ ಪರಿಣಾಮ ಏನೆಂಬುದನ್ನು ತೋರಿಸಿಕೊಡುತ್ತಿದೆ ಮೋದಿ ಸರ್ಕಾರ್!.