ಅನನ್ಯ ಪ್ರತಿಭೆಯ ಅನನ್ಯ..
ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಕ್ರೀಡೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸುಳ್ಯ ತಾಲ್ಲೂಕಿನ ಕನಕಮಜಲು ಕಣಜಾಲಿನ ಅನನ್ಯ ಕೆ.ವಿ. ಬೆಳೆಯುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾಳೆ.
ಅನನ್ಯ ತನ್ನ 10ನೇ ವಯಸ್ಸಿನಲ್ಲಿ ಸ್ವಆಸಕ್ತಿಯಿಂದ ತಂದೆ ಕೃಷಿಕ ವಿಶ್ವನಾಥ ಗೌಡ ಮತ್ತು ತಾಯಿ ಶಿಕ್ಷಕಿ ಸರೋಜರ ಪೋತ್ಸಾಹದಿಂದ ಗುರುಗಳಾದ ವಿದುಷಿ ಸೌಮ್ಯ ವೇಣುಗೋಪಾಲ್ ಅವರಲ್ಲಿ ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತ ಕಲಿಕೆ ಆರಂಭಿಸಿದಳು. ಸುಳ್ಯದ ಖ್ಯಾತ ಸುಗಮ ಸಂಗೀತಗಾರ ಕೆ.ಆರ್.ಗೋಪಾಲಕೃಷ್ಣ ಅವರ ಬಳಿ ಸುಗಮ ಸಂಗೀತ ಕಲಿಯುತ್ತಿದ್ದಾಳೆ.
ಸ್ವಲ್ಪ ಸಮಯ ವಿದುಷಿ ಪ್ರಮಿಳಾ ಲೊಕೇಶ್ ಹಾಗೂ ಮನಸ್ವಿ ಅವರ ಜೊತೆ ಭರತನಾಟ್ಯ ಅಭ್ಯಾಸ ಮಾಡಿ ಇದೀಗ ಮತ್ತೆ ಸೌಮ್ಯ ವೇಣುಗೋಪಾಲ್ ಜೊತೆ ಭರತನಾಟ್ಯ ಮುಂದುವರಿಸಿದ್ದಾರೆ. ಭರತನಾಟ್ಯ ಜೂನಿಯರ್ ಶಿಕ್ಷಣದಲ್ಲಿ ಉತ್ತಮ ಅಂಕದಿಂದ ತೇರ್ಗಡೆ ಹೊಂದಿ ಸೀನಿಯರ್ ಪರೀಕ್ಷೆಗಾಗಿ ಸಿದ್ದತೆ ನಡೆಸುತ್ತಿದ್ದಾಳೆ.
ಬಲಮುರಿ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಹಾಗೂ ಬೆಂಗಳೂರಿನ ಕೆಂಗೇರಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ, ಕಡಬ ದೇವಳದಲ್ಲಿ, ಸಾರಕೂಟೇಲು ನಾಗಬ್ರಹ್ಮ ಸನ್ನಿಧಿ, ಪುತ್ತೂರು, ಜಾಲ್ಸೂರಿನಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಈಕೆ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಇದರೊಂದಿಗೆ ಜಾನಪದ ನೃತ್ಯ, ಸಿನೆಮಾ ನೃತ್ಯವನ್ನು ಚೆನ್ನಾಗಿ ಮಾಡಬಲ್ಲಳು.
ಪ್ರತಿಭೆಗೆ ಸಂದ ಪ್ರಶಸ್ತಿ..
ಶಾಸ್ತ್ರೀಯ ಸಂಗೀತವನ್ನು ಅಧ್ಯಯನ ಮಾಡುತಿದ್ದು ಹಲವೆಡೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಿ ತನ್ನ ಸುಮಧುರ ಕಂಠ ಸಿರಿಯಿಂದ ಹಲವರ ಮನಸನ್ನು ಸೆಳೆದಿದ್ದಾಳೆ..ಸುಗಮ ಸಂಗೀತದಲ್ಲೂ ತನ್ನ ಉತ್ತಮ ಕಂಠದಿಂದ ಎಲ್ಲರ ಮನವನ್ನು ಗೆಲ್ಲುತ್ತಿದ್ದಾಳೆ.
ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಲಘು ಸಂಗೀತ,ಭಾವಗೀತೆ,ಜಾನಪದ ಗೀತೆ ಸ್ಪರ್ಧೆಯಲ್ಲಿ ಬಹುಮಾನ ಪಡಕೊಂಡಿದ್ದಾಳೆ. ಅನನ್ಯ ಉತ್ತಮ ಕ್ರೀಡಾಪಟುವೂ ಹೌದು. ಜೊತೆಗೆ ಆಕೆ ಉತ್ತಮ ಕಬಡ್ಡಿ ಆಟಗಾರ್ತಿಯಾಗಿದ್ದಾಳೆ. ಎತ್ತರ ಜಿಗಿತ, ದೂರ ಜಿಗಿತ ಹಾಗೂ ಓಟಗಾರ್ತಿಯಾಗಿದ್ದು ಹಲವು ಬಾರಿ ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದ್ದಾಳೆ.
ಪ್ರಸ್ತುತ ಅನನ್ಯ ಸುಳ್ಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ದ್ವೀತಿಯ ಪಿ.ಯು.ಸಿಯಲ್ಲಿ ವಾಣಿಜ್ಯ ವಿಭಾಗವನ್ನು ಅಧ್ಯಾಯನ ಮಾಡುತ್ತಿದ್ದು ಕಲಿಕೆಯಲ್ಲೂ ಮುಂದಿದ್ದಾಳೆ.
ಅನನ್ಯಳ ಬಯಕೆ ಅನನ್ಯವಾಗಿದ್ದು ಭವಿಷ್ಯದಲ್ಲಿ ಕಲೆಯಲ್ಲಿ ಸಾಧನೆ ಮಾಡಿ ತಾನು ಕಲಿತ ಕಲೆಯನ್ನು ಇನ್ನೊಬ್ಬರಿಗೆ ಕಲಿಸಿಕೊಡಬೇಕೆಂದು ಹೇಳುತ್ತಾರೆ.