ಸುಳ್ಯದ ರಘುರಾಮ ರೈ ನಾಟಿ ಔಷಧಿ ಹಾಗೂ ತಾಳಮದ್ದಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಸರುವಾಸಿ.
ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ರಘುರಾಮ ರೈ ಅಲೋಪತಿ ಔಷಧಿಯಲ್ಲಿ ವಾಸಿಯಾಗದ ಹಲವು ಖಾಯಿಲೆಗಳನ್ನು ತನ್ನ ನಾಟಿ ಔಷಧಿ ಮೂಲಕವೇ ಗುಣಮುಖಗೊಳಿಸಿದ್ದಾರೆ. ಇಂದಿನ ಆಧುನಿಕ ಔಷಧಗಳಿಂದ ಗುಣಮುಖವಾಗದ ಅನೇಕ ರೋಗ, ಖಾಯಿಲೆಗಳನ್ನು ವಾಸಿಮಾಡುತ್ತಿದ್ದಾರೆ. ರಘುರಾಮರವರ ಕೈ ಗುಣವೇ ಅಂಥದ್ದು ಅಂದರೆ ತಪ್ಪಾಗಲಾರದು.
ಪ್ರತಿಶಾಯ(ಸೈನಾಟಿಸ್)ಸಂಧಿವಾತ, ಅಮವಾತ, ಹೃದೇಶಿ ವಾತ, ಪಾಶ್ವ ವಾಯು, ಸೊಂಟ ನೋವು ಹೀಗೆ 80 ರೀತಿಯ ವಾತ ಕಾಯಿಲೆಗಳಿಗೆ ಹಾಗೂ ಜಾಂಡೀಸ್, ಅನಿಮಿಯ, ಸರ್ಪ ಸುತ್ತು, ಸ್ತ್ರಿಯರ ಮುಟ್ಟುದೋಷ, ಬಿಳಿಸೆರಗು, ವಿವಿಧ ರೀತಿಯ ತಲೆನೋವು, ಉಬ್ಬಸ, ಮಧುಮೇಹ, ಕೆಮ್ಮು, ದಮ್ಮು, ಕಫ,ನೇವಸ, ಬೇರೆ ಬೇರೆ ರೀತಿಯ 70 ವಿಧದ ಖಾಯಿಲೆಗಳಿಗೆ ಔಷಧಿ ನೀಡುತ್ತಾರೆ. ವಿಷ ಜಂತು ಕಡಿದರೆ, ಬಂಜೆತನ ನಿವಾರಣಗೆ, ಸ್ಥೂಲಕಾಯಕ್ಕೆ, ಬಾಲನೆರೆಗೆ, ತಲೆಹೊಟ್ಟು ನಿವಾರಣೆಗೆ, ಗರ್ಭಿಣಿ ಸ್ತ್ರೀಯರ ಸಮಸ್ಯೆ, ಹೀಗೆ ಹಲವು ಕಾಯಿಲೆಗಳಿಗೆ ನಾಟಿ ಔಷಧಿ ನೀಡಿ ಗುಣಪಡಿಸಿದ ಕೀರ್ತಿ ರೈಯವರಿಗೆ ಸಲ್ಲುತ್ತದೆ.
ರೈಯವರ ಇನ್ನೊಂದು ವಿಶೇಷವೆಂದರೆ ನಾಟಿ ಔಷಧಿಗೆ ಮಾತ್ರವಲ್ಲ ತಾಳಮದ್ದಳೆ ಕಲೆಯಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧರಾದವರು.
ರಾಮ, ಕೃಷ್ಣ, ನಾರದ, ಧರ್ಮರಾಯ, ಲವ-ಕುಶ, ಹೀಗೆ ಅನೇಕ ಪಾತ್ರಗಳಿಗೆ ಪಾತ್ರಗಳಿಗೆ ಅನುಗುಣವಾಗಿ, ಪಾತ್ರದ ಚೌಕಟ್ಟು ಮೀರದಂತೆ ಉತ್ತಮ ಅರ್ಥದಾರಿಯಾಗಿ ಕಾಣಿಸಿಕೊಂಡಿದ್ದಾರೆ. ತಾಳಮದ್ದಳೆಯಲ್ಲಿ ರೈ ಅರ್ಥ ಹೇಳುತ್ತಿದ್ದಾರೆ ಅಂದರೆ ಅಭಿಮಾನಿಗಳು ಮೂಕ ಪ್ರೇಕ್ಷಕರಾಗಿ ಮೈಮರೆಯುತ್ತಾರೆ. ಸುಮಾರು 1000ಕ್ಕೂ ಅಧಿಕ ತಾಳಮದ್ದಳೆಯಲ್ಲಿ ಮುಖ್ಯ ಪಾತ್ರಗಳಿಗೆ ಅರ್ಥ ಹೇಳಿದ್ದಾರೆ.
ಇವರು ಸುಳ್ಯದ ಉಬರಡ್ಕದ ಕಾರಣಿಕ ದೈವಗಳಾದ ಮಿತ್ತೂರು ನಾಯರ್ ಹಾಗೂ ಉಳ್ಳಾಕ್ಲು ದೇವರ ಪೂಜಾರಿಯಾಗಿ ಕಳೆದ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ರಘುರಾಮ ರೈಯವರ ತಾಳಮದ್ದಳೆ ಹಾಗೂ ನಾಟಿ ಔಷಧಗಳ ಪರಿಣತಿ, ಸೇವೆ, ಸಾಧನೆಗಳನ್ನು ಮನಗಂಡು ಅನೇಕ ಸಂಘ ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಅವರನ್ನು ಗೌರವಿಸಿದೆ.
ಚಿತ್ರದುರ್ಗದ ಮುರುಗರಾಜೇಂದ್ರ ಮಠದಲ್ಲಿ ನಡೆದ ರಾಜ್ಯಮಟ್ಟದ ಆಯುರ್ವೇದ ಸಮ್ಮೇಳನದಲ್ಲಿ ರೈಯವರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಸುಳ್ಯ ತಾಲ್ಲೂಕಿನ ಮರ್ಕಂಜ ಗ್ರಾಮದ ಮಿನುಂಗೂರು ವಸಂತೋತ್ಸವ ಹಾಗೂ ಕಳೆದ ವರ್ಷ ಸುಳ್ಯ ತಾಲ್ಲೂಕಿನ ಹರಿಹರದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿದೆ.
ಒಟ್ಟಿನಲ್ಲಿ ಇಂದಿನ ಆಧುನಿಕ ಬದುಕಿನಲ್ಲಿ ಕಣ್ಮರೆಯಾಗುತ್ತಿರುವ ನಾಟಿ ಔಷಧಿಯನ್ನು ಉಳಿಸಿ ಬೆಳೆಸುತ್ತಿರುವ ರಘುರಾಮ ರೈಯವರ ಸೇವೆ, ಸಾಧನೆ ನಿಜಕ್ಕೂ ಶ್ಲಾಘನೀಯ.