ನವದೆಹಲಿ : ಮುಂದಿನ ಆರ್ಥಿಕ ವರ್ಷದಿಂದ ಪ್ರತ್ಯೇಕ ರೈಲ್ವೆ ಮುಂಗಡ ಪತ್ರ ಮಂಡಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ 92 ವರ್ಷಗಳ ಇತಿಹಾಸವಿರುವ ಭಾರತದ ರೈಲ್ವೇ ಬಜೆಟ್ಗೆ 2017ರಿಂದ ತೆರೆಬೀಳಲಿದೆ.
ರೈಲ್ವೆ ಮುಂಗಡ ಪತ್ರವನ್ನು ಸಾಮಾನ್ಯ ಮುಂಗಡಪತ್ರದೊಂದಿಗೆ ಸೇರಿಸುವಂತೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಕಳೆದ ಜುಲೈ ತಿಂಗಳಲ್ಲೇ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿದ್ದರು. ಈ ಪ್ರಸ್ತಾವನೆಗೆ ಹಣಕಾಸು ಸಚಿವ ಸಚಿವ ಅರುಣ್ ಜೇಟ್ಲಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಕೇಂದ್ರ ಬಜೆಟ್ನೊಂದಿಗೆ ರೈಲ್ವೆ ಬಜೆಟ್ ನ್ನು ಸೇರಿಸುವ ಸಂಬಂಧ ಅರುಣ್ ಜೇಟ್ಲಿ, ಐದು ಸದಸ್ಯರನ್ನೊಳಗೊಂಡ ಸಮಿತಿಯನ್ನೂ ರಚಿಸಿದ್ದಾರೆ. ಇದರ ಸಾಧಕ ಬಾದಕಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
1924ರಲ್ಲಿ 10 ಸದಸ್ಯರನ್ನೊಳಗೊಂಡ ಸಮಿತಿಯ ಶಿಫಾರಸಿನ ಮೇಲೆ ರೈಲ್ವೆ ಮುಂಗಡಪತ್ರವನ್ನು ಸಾಮಾನ್ಯ ಮುಂಗಡಪತ್ರದಿಂದ ಪ್ರತ್ಯೇಕಿಸಿ ಮಂಡಿಸಲಾಗಿತ್ತು.