ನವದೆಹಲಿ : ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರಿಗೆ ಸಹಾಯ ಮಾಡಿದ ಸಂಬಂಧ ವಿವಾದ ಎದುರಿಸುತ್ತಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಭಾನುವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು.
ಭಾನುವಾರ ನಡೆದ ಸಭೆಯಲ್ಲಿ ಹಿರಿಯ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್, ಸೃತಿ ಇರಾನಿ ಮತ್ತು ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದರೆಂದು ಮೂಲಗಳು ತಿಳಿಸಿವೆ.
ಮುಂಗಾರು ಅಧಿವೇಶನಕ್ಕೂ ಮೊದಲು ನಡೆದ ಈ ಭೇಟಿ ಬಹಳ ಮಹತ್ವ ಪಡೆದಿದೆ. ಮಂಗಳವಾರದಿಂದ ಪ್ರಾರಂಭವಾಗುವ ಮುಂಗಾರು ಅಧಿವೇಶನದಲ್ಲಿ ಲಲಿತ ಮೋದಿ ವಿವಾದ ಮತ್ತು ವ್ಯಾಪಂ ಭೃಷ್ಟಾಚಾರ ಪ್ರಕರಣಗಳ ಕುರಿತು ವಿರೋಧ ಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಂಭವವಿದೆ.
ಭೂಸ್ವಾಧೀನ, ಜಿ ಎಸ್ ಟಿ ವಿಧೇಯಕಗಳು ಚರ್ಚೆಗೆ ಬರುವ ನಿರೀಕ್ಷೆ ಇದೆ. ರಾಜ್ಯಸಭೆಯಲ್ಲಿ ಬಹುಮತ ಕಡಿಮೆ ಇರುವ ಎನ್ ಡಿ ಎ ಸರ್ಕಾರಕ್ಕೆ ಈ ವಿಧೇಯಕಗಳು ಸರ್ಕಾರಕ್ಕೆ ಸಂಧಿಘ್ನ ಸ್ಥಿತಿ ತರಲಿದೆ.
ವ್ಯಾಪಂ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಕೂಡಾ ಅಮಿತ್ ಶಾ ಅವರನ್ನು ಭೇಟಿ ಮಾಡುವ ನಿರೀಕ್ಷೆ ಇದೆ.