ನವದೆಹಲಿ : ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್, ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಹೆಸರನ್ನು ಅಧಿಕೃತವಾಗಿ ಘೊಷಿಸಿದೆ.
ಕಾಂಗ್ರೆಸ್ಸಿನಲ್ಲಿ ಸಿಎಂ ಅಭ್ಯರ್ಥಿಯನ್ನು ಘೋಷಿಸುವ ಪರಿಪಾಠ ಇಲ್ಲದಿದ್ದರೂ, ಇದೇ ಮೊದಲ ಬಾರಿಗೆ ಆ ಸಂಪ್ರದಾಯವನ್ನು ಮುರಿದಿರುವುದು ಗಮ ನಾರ್ಹ.
ಇದೇ ವೇಳೆ ಚುನಾವಣಾ ಪ್ರಚಾರಾಂದೋಲನ ಸಮಿತಿ ಅಧ್ಯಕ್ಷರನ್ನಾಗಿ ಸಂಜಯ್ ಸಿಂಗ್, ಸಮನ್ವಯ ಸಮಿತಿ ಅಧ್ಯಕ್ಷರಾಗಿ ರಾಜ್ಯಸಭೆ ಸಂಸದ ಪ್ರಮೋದ್ ತಿವಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೊಷಿಸಲಾಗುತ್ತದೆ ಹಾಗೂ ಪ್ರಿಯಾಂಕಾ ವಾದ್ರಾಗೆ ಪ್ರಚಾರಾಂದೋಲನ ನೇತೃತ್ವ ನೀಡಲಾಗುತ್ತದೆ ಎಂದು ಇತ್ತೀಚೆಗೆ ವ್ಯಾಪಕವಾಗಿ ಹರಡಿದ್ದ ಸುದ್ದಿಗಳಿಗೆ ಈಮೂಲಕ ತೆರೆಬಿದ್ದಿದೆ.