ನವದೆಹಲಿ : ಕ್ರೀಡಾಪಟುಗಳಿಗೆ ಮೊದಲು ಅವರನ್ನು ಉತ್ತೇಜಿಸುವ ವಾತಾವರಣ ಸೃಷ್ಟಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ತಮ್ಮ 20ನೇ ಆವೃತ್ತಿಯ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಅವರು, ದೇಶದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ನಾವು ಒಲಿಂಪಿಕ್ ಕುರಿತು ಮಾತನಾಡುವಾಗ ಸಾಧನೆಯನ್ನು ಮೆಡಲ್ ಗಳ ಲೆಕ್ಕಾಚಾರದಲ್ಲಿ ಅಳೆಯುತ್ತೇವೆ. ಇದು ಸರಿಯಲ್ಲ, ಎಲ್ಲವನ್ನೂ ಗೆಲುವು ಮತ್ತು ಸೋಲಿನ ಮೂಲಕ ಅಳೆಯಬೇಡಿ ಎಂದು ಕರೆ ನೀಡಿದರು.
ರಿಯೋ ಒಲಿಂಪಿಕ್ಸ್ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಪಟಿಯಾಲಾದ ಎನ್ಐಎಸ್ ಗೆ ಕ್ರೀಡಾ ಸಚಿವ ಸರ್ಬಾನಂದ ಸೋನೋವಾಲ್ ಭೇಟಿ ನೀಡಿ ತರಬೇತಿಯನ್ನು ಪರಿಶೀಲಿಸಿದ್ದಾರೆ. ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರೂ ಸೋನೋವಾಲ್ ಚುನಾವಣೆಯಲ್ಲಿ ಸಕ್ರಿಯರಾಗಿದ್ದರು, ಜೊತೆಗೆ ದೇಶದ ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸುವ ನೆಲೆಯಲ್ಲಿ ಭೇಟಿ ನೀಡಿದ್ದಾರೆ ಎಂದು ಸೋನಾಲಾಲ್ ಅವರನ್ನು ಶ್ಲಾಘಿಸಿದರು.
ಪರಿಸರ ಕುರಿತು ನಿರ್ಲಕ್ಷ್ಯ ಹೆಚ್ಚಾಗುತ್ತಿದೆ. ಇದರಿಂದಾಗಿ ಉಷ್ಣತೆಯೂ ಹೆಚ್ಚಾಗಿದೆ. ಹಾಗಾಗಿ, ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಜೂನ್ 8 ಜಾಗತಿಕ ಪರಿಸರ ದಿನವಾಗಿದ್ದು, ಈ ಹಿನ್ನಲೆಯಲ್ಲಿ ನಾವೆಲ್ಲರೂ ಅರಣ್ಯ ಮತ್ತು ನೀರು ಉಳಿಸಲು ಎಚ್ಚರಗೊಳ್ಳಬೇಕಾಗಿದೆ ಎಂದ ಮೋದಿ, ಪ್ರತಿ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅರಣ್ಯ ಮತ್ತು ನೀರು ಉಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಧ್ಯ ಪ್ರದೇಶದಿಂದ ಗೌರವ್ ಎಂಬ ವಿದ್ಯಾರ್ಥಿ ಪತ್ರ ಬರೆದಿದ್ದು, ಪರೀಕ್ಷೆಯಲ್ಲಿ ನಾನು ಶೇ.89ರಷ್ಟು ಅಂಕ ಗಳಿಸಿದ್ದೇನೆ. ಇದಕ್ಕೆ ಮನೆಯಲ್ಲೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಾನು ಶೇ.90ರ ಮೇಲೆ ಅಂಕ ಪಡೆಯಬೇಕಿತ್ತು ಎಂದು ಕುಟುಂಬದವರು ಹೇಳುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದ್ದನು ಎಂದ ಅವರು, ಯಾಕೆ ಎಲ್ಲಾ ವಿಷಯವನ್ನು ನೀವು ಋಣಾತ್ಮಕವಾಗಿಯೇ ಕಾಣುತ್ತೀರಿ? ಆತ ಉತ್ತಮ ಅಂಕ ಪಡೆದಿದ್ದಕ್ಕೆ ನಾವೆಲ್ಲರೂ ಸಂಭ್ರಮಿಸಬೇಕು ಎಂದು ಹೇಳಿದರು.