ಉಜ್ಜಯನಿ : ಉಜ್ಜಯನಿಯಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ 'ವೈಚಾರಿಕ ಮಹಾಕುಂಭ' ಕಾರ್ಯಕ್ರಮದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಸಂಪ್ರದಾಯದಲ್ಲಿ ಕುಂಭಮೇಳದ ವೈಶಿಷ್ಟ್ಯತೆಯನ್ನು ವಿವರಿಸಿದರು. ಎಲ್ಲದಕ್ಕಿಂತ ಮೊದಲು ಇಲ್ಲಿ ಈ ದಿನ ಸೇರಿರುವ ಎಲ್ಲಾ ಸಂತರಿಗೆ ನಾನು ತಲೆಬಾಗುತ್ತೇನೆ. ಇಲ್ಲಿ ಏನು ಆಗುತ್ತಿದೆಯೋ ಅದು ಹೊಸ ಪ್ರಯತ್ನದ ಜನ್ಮ, ಗತಕಾಲದಲ್ಲಿ ಏನು ನಡೆದಿದೆಯೋ ಅದರ ಆಧುನಿಕ ಆವೃತ್ತಿ. ಕುಂಭಮೇಳ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸುತ್ತದೆ. ಇದು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ಒಂದು ಭಾಗ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಮ್ಮಲ್ಲಿ ಒಬ್ಬ ಭಿಕ್ಷುಕ ಕೂಡ ತನಗೆ ಕೊಡುವವನಿಗೆ ಮತ್ತು ಕೊಡದೇ ಇರುವವನಿಗೆ ಸಹ ಒಳ್ಳೆಯದಾಗಲಿ ಎಂದು ಹೇಳುತ್ತಾನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಧ್ಯೇಯವಾಕ್ಯ ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಅಂತಹ ಸಂಪ್ರದಾಯಕ್ಕೆ ಸೇರಿದವರು ನಾವಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಮೊದಲು ಸಮುದ್ರ ದಾಟುವುದು ಅಪವಿತ್ರ ಎನ್ನಲಾಗುತ್ತಿತ್ತು. ಆದರೆ ಈಗ ಬದಲಾಗಿದೆ. ಅದೇ ರೀತಿ ಕಾಲಕ್ಕೆ ತಕ್ಕಂತೆ ಕೆಲವು ಸಂಪ್ರದಾಯಗಳು ಬದಲಾಗುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಮತ್ತು ಮಧ್ಯಪ್ರದೇಶ, ಛತ್ತಿಸ್ ಗಡ, ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.