ಭೋಪಾಲ್ : ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸಿಂಹಸ್ಥ ಕುಂಭಮೇಳ ಪವಿತ್ರ ಶಾಹಿ ಸ್ನಾನಕ್ಕೆ ತೆರೆ ಬಿದ್ದಿದೆ. 12 ವರ್ಷಕ್ಕೊಮ್ಮೆ ಬರುವ ಕುಂಭಮೇಳದ ಮೂರನೇ ಹಾಗೂ ಕೊನೆಯ ಶಾಹಿ ತೀರ್ಥಸ್ನಾನ ಪವಿತ್ರ ಕ್ಷೀಪ್ರಾ ನದಿಯಲ್ಲಿ ವೈಶಾಖ ಪೂರ್ಣಿಮೆಯಂದು ಶನಿವಾರ ಲಕ್ಷಾಂತರ ಸಾಧು-ಸಂತರು, ಭಕ್ತರು ನದಿಯಲ್ಲಿ ಮುಳುಗು ಏಳುವ ಮೂಲಕ ಸಂಪನ್ನವಾಯಿತು.
ಕೋಟ್ಯಂತರ ಭಾರತೀಯರು ಮಾತ್ರವಲ್ಲದೆ ವಿದೇಶಿಯರೂ ಶ್ರದ್ಧಾ, ಭಕ್ತಿಯಿಂದ ಪಾಲ್ಗೊಂಡಿದ್ದು, ಹರ ಹರ ಮಹದೇವ್ ಎಂಬ ಮಂತ್ರ ಪಠಣ ಇಡೀ ಉಜ್ಜಯನಿಯ ಕಣ ಕಣದಲ್ಲಿಯೂ ಮೇಳೈಸಿತ್ತು. ಮಹಾಕಾಲನ ಸನ್ನಿಧಿಯಲ್ಲಿ ನಾಗಾ ಸಾಧುಗಳ ಸಮ್ಮುಖದಲ್ಲಿ ಕ್ಷಿಪ್ರಾ ನದಿಯಲ್ಲಿ ಮಿಂದು ಭಕ್ತಕೋಟಿ ಭಕ್ತಿ-ಭಾವದಿಂದ ಪುಳಕಿತರಾದರು.
ಕೊನೆಯ 24 ಗಂಟೆಯಲ್ಲಿ 75ಲಕ್ಷಕ್ಕೂ ಅಧಿಕ ಜನರು ಪವಿತ್ರ ಸ್ನಾನ ಮಾಡಿದರು. ಈ ಬಾರಿ ನಡೆದ ಸಿಂಹಸ್ಥ ಕುಂಭ ಮಹಾಮೇಳದಲ್ಲಿ ಒಟ್ಟು 8ಕೋಟಿ ಜನರು ಆಗಮಿಸಿರುವುದು ದಾಖಲೆಗೆ ಕಾರಣವಾಗಿದೆ. ಒಟ್ಟಿನಲ್ಲಿ ಮಹಾಕಾಲನ ನಗರ ಉಜ್ಜಯನಿಯಲ್ಲಿ ಕುಂಭಮೇಳ ನಿರ್ವಿಘ್ನವಾಗಿ ನೆರವೇರಿರುವುದು ವಿಶೇಷ. ಏಪ್ರಿಲ್ 9, 2028ರಂದು ಮತ್ತೆ ಕುಂಭಮೇಳ ನಡೆಯಲಿದೆ.