ಮುಂಬೈ : ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧವನ್ನು ಎತ್ತಿ ಹಿಡಿದಿರುವ ಬಾಂಬೆ ಹೈಕೋರ್ಟ್, ಮಹಾರಾಷ್ಟ್ರದ ಹೊರಗಿನಿಂದ ಗೋಮಾಂಸವನ್ನು ತಂದು ಮಾರಾಟಮಾಡುವುದು ಮತ್ತು ತಿನ್ನುವುದು ಅಕ್ರಮವಲ್ಲ ಎಂದು ತೀರ್ಪು ನೀಡಿದೆ.
ಮಹಾರಾಷ್ಟ್ರದಲ್ಲಿ ಹೇರಲಾಗಿರುವ ಗೋಮಾಂಸ ಮೇಲಿನ ನಿಷೇಧಕ್ಕಿರುವ ಸಾಂವಿಧಾನಿಕ ಸಿಂಧುತ್ವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ವಿಚಾರಣೆಯನ್ನು ನಡೆಸಿದ್ದ ಬಾಂಬೆ ಹೈಕೋರ್ಟ್ ನ ಜಸ್ಟಿಸ್ ಎ.ಎಸ್.ಓಕಾ ಮತ್ತು ಎಸ್.ಸಿ.ಗುಪ್ತೆ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಜನವರಿಯಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಈಗ ತನ್ನ ತೀರ್ಪನ್ನು ಪ್ರಕಟಿಸಿದ್ದು, .ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧವನ್ನು ಎತ್ತಿ ಹಿಡಿದಿದೆ.
ಈ ಮೂಲಕ ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆ 1976ರ ಕಾಯ್ದೆಯಲ್ಲಿ ಗೋಮಾಂಸ ಆಮದು ಮತ್ತು ಗೋಮಾಂಸ ದಾಸ್ತಾನನ್ನು ಕ್ರಿಮಿನಲ್ ಅಪರಾಧ ಎಂದು ಹೇಳಿದ್ದ ಎರಡು ನಿಯಮಗಳನ್ನು ನ್ಯಾಯಾಲಯ ರದ್ದು ಪಡಿಸಿದೆ.
2015ರಲ್ಲಿ ರಾಷ್ಟ್ರಪತಿಗಳು ಮಹಾರಾಷ್ಟ್ರ ಪಶು ಸಂರಕ್ಷಣೆ (ತಿದ್ದುಪಡಿ) ಕಾಯಿದೆಗೆ ಅಂಕಿತ ಹಾಕಿದ್ದರು. 1976ರ ಮೂಲ ಕಾಯಿದೆಯು ರಾಜ್ಯದಲ್ಲಿ ಗೋಹತ್ಯೆಯನ್ನು ನಿಷೇಧಿಸಿತ್ತು. ತಿದ್ದುಪಡಿ ಮಾಡಲಾದ ಕಾಯ್ದೆಯು ಗೋಹತ್ಯೆ ಮಾತ್ರವಲ್ಲದೆ ಎಮ್ಮೆ, ಕೋಣಗಳ ಹತ್ಯೆಯನ್ನು ಕೂಡ ನಿಷೇಧಿಸಿತ್ತು. ಅಲ್ಲದೇ ಖಾದ್ಯದ ಉದ್ದೇಶಕ್ಕಾಗಿ ಈ ಮಾಂಸವನ್ನು ಶೇಖರಿಸುವುದು ಮತ್ತು ಬಳಸುವುದನ್ನು ಕೂಡ ನಿಷೇಧಿಸಿತ್ತು. ಈ ಅಪರಾಧ ಎಸಗಿದವರಿಗೆ 2,000 ರೂ ದಂಡ ಹಾಗೂ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಬಹುದಿತ್ತು.