ಕಠ್ಮಂಡು : ಪೊಲೀಸ್ ಗೋಲೀಬಾರ್ ನಲ್ಲಿ ಸಾವಿಗೀಡಾದ ಭಾರತೀಯನ ಸಾವನ್ನು ಅತ್ಯಂತ ವಿಷಾದನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇತ್ತೀಚೆಗೆ ನೇಪಾಳ ಸಂಸತ್ ಅಂಗೀಕರಿಸಿದ ನೂತನ ಸಂವಿಧಾನದಲ್ಲಿ ತಮಗೆ ಸಿಗಬೇಕಾದ ನ್ಯಾಯ, ಪ್ರಾಶಸ್ತ್ಯ ಸಿಗಲಿಲ್ಲ ಎಂದು ಹೋರಾಡುತ್ತಿರುವ ಮಾಧೇಸಿ ಹಾಗೂ ಇತರ ಭಾರತೀಯ ಮೂಲದ ನಾಗರಿಕರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದು, ನಿನ್ನೆ ನಡೆದ ಪೊಲೀಸ್ ಗೋಲೀಬಾರ್ ನಲ್ಲಿ ಬಿಹಾರ್ ಮೂಲದ 24ರ ಹರೆಯದ ಆಶಿಶ್ ಕುಮಾರ್ ರಾಮ್ ತಲೆಗೆ ಗುಂಡು ತಗುಲಿ ಸಾವಿಗೀಡಾಗಿದ್ದ. ಪೊಲೀಸರು ಯದ್ವಾತದ್ವಾ ಗುಂಡು ಹಾರಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದ ಅನೇಕರು ಗಾಯಗೊಂದಿದ್ದಾರೆ.
ನೇಪಾಳದ ಈ ಕೃತ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ಮೋದಿ, ಈ ಹತ್ಯೆಯನ್ನು ಖಂಡಿಸಿ ನೇಪಾಳದ ಪ್ರಧಾನಿ ಕೆ.ಪಿ.ಓಳಿಯವರೊಂದಿಗೆ ಫೋನ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ ಈ ಘಟನೆ ಬಗ್ಗೆ ವರದಿ ನೀಡುವಂತೆ ವಿನಂತಿಸಿದ್ದಾರೆ.
ಅಲ್ಲದೆ, ಇದು ನೇಪಾಳದ ಆಂತರಿಕ ಸಮಸ್ಯೆಯಾಗಿದ್ದು, ಆದಷ್ಟು ಬೇಗ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಎಂದು ಸಹ ನೇಪಾಳ ಸರಕಾರಕ್ಕೆ ಸೂಚಿಸಿದ್ದಾರೆ.
'ನೇಪಾಳ ಎದುರಿಸುತ್ತಿರುವ ಸಮಸ್ಯೆ ರಾಜಕೀಯವಾಗಿದ್ದು, ಬಲಪ್ರಯೋಗದಿಂದ ಅದನ್ನು ಪರಿಹರಿಸಲಾಗದು. ಈ ಪ್ರತಿಭಟನೆಗೆ ಕಾರಣವಾದ ವಿಚಾರಗಳನ್ನು ವಿಶ್ವಾಸ ಮೂಡುವಂತೆ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಬೇಕು' ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ, ಹಾಗೂ 'ನಾವು ಪರಿಸ್ಥಿತಿಯನ್ನು ಕೂಲಂಕುಶವಾಗಿ ಅವಲೋಕಿಸುತ್ತಿದ್ದೇವೆ' ಎಂದು ಹೇಳಿದರು.
ಗೋಳಿಬಾರ್ ನಡೆದ ಕೆಲವೇ ಸಮಯದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನೇಪಾಳದ ಪ್ರಧಾನಿ ಓಳಿ ನೇಪಾಳದ ವಿರುದ್ಧ ಭಾರತದ ನಿಲುವನ್ನು, ಅದರಲ್ಲೂ ವಿಶೇಷವಾಗಿ ಸೆಪ್ಟೆಂಬರ್ 20, 2015ರಂದು ನೇಪಾಳದ ಸಂವಿಧಾನ ಅಂಗೀಕಾರಗೊಂಡ ನಂತರದ ಭಾರತದ ನೀತಿಯನ್ನು ಟೀಕಿಸಿದರು.
ಓಳಿ ತಮ್ಮ ಭಾಷಣದಲ್ಲಿ, ಭಾರತ ಮಾಧೇಸ್-ಆಧರಿತ ರಾಜಕೀಯ ಪಕ್ಷಗಳನ್ನು ನೇಪಾಳ ಸರಕಾರದ ವಿರುದ್ಧ ಎತ್ತಿ ಕಟ್ಟುತ್ತಿದೆ ಎಂದರಲ್ಲದೆ, ಉಭಯ ದೇಶಗಳ ನಡುವಿನ 1,751 ಕಿ.ಮಿ. ಉದ್ದದ ಗಡಿಯಲ್ಲಿರುವ ಬಹುತೇಕ ಎಲ್ಲ ಸರಕು ಆಮದು ಮಾಡುವ ಸ್ಥಳಗಳಲ್ಲಿ ತಡೆಯೊಡ್ದುತ್ತಿದೆ ಎಂದು ಆಪಾದಿಸಿದರು.
ಭಾರತದ ಕೆಲವೊಂದು ಸಲಹೆಗಳನ್ನು ತಿರಸ್ಕರಿಸಿ ನೇಪಾಳ ತನ್ನ ನೂತನ ಸಂವಿಧಾನ ಅಂಗೀಕರಿಸಿದ ನಂತರ ಭಾರತ ಮತ್ತು ನೇಪಾಳದ ಸಂಬಂಧದಲ್ಲಿ ಬಹಳ ತೊಡಕುಗಳು ಉಂಟಾಗಿದ್ದು, ಚೀನಾ ಕಡೆ ವಾಲುತ್ತಿರುವ ನೂತನ ಪ್ರಧಾನಿ ಓಳಿಯ ನಡೆ ಸಮಸ್ಯೆಯನ್ನು ಇನ್ನಷ್ಠು ಜಟಿಲಗೊಳಿಸುತ್ತಿದೆ. ನೇಪಾಳ ಪೆಟ್ರೋಲ್, ಡೀಸೆಲ್ ಸೇರಿದಂತೆ ತನ್ನ ಆವಶ್ಯಕ ವಸ್ತುಗಳ ಆಮದಿಗೆ ಭಾರತವನ್ನು ಅವಲಂಬಿಸಿದ್ದು, ಮಾಧೇಸಿ ಪ್ರತಿಭಟನೆ ಆರಂಭವಾದ ನಂತರ ಆವಶ್ಯಕ ವಸ್ತುಗಳ ತೀವ್ರ ಕೊರತೆ ಎದುರಿಸುತ್ತಿದೆ ಹಾಗೂ ಈ ಸಮಸ್ಯೆಗೆ ಭಾರತವನ್ನು ದೂಷಿಸುತ್ತಿದೆ.