ನವದೆಹಲಿ : ಭಾರತದಲ್ಲಿ ಹೆದ್ದಾರಿ, ರೈಲ್ವೆ, ಮತ್ತು ಐವೇ ಗಳನ್ನು ಅಭಿವೃದ್ಧಿ ಪಡಿಸಲು ಸತತ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.
50,800 ಕೋಟಿ ರೂಪಾಯಿಯ ಮಹತ್ವಾಕಾಂಕ್ಷೆಯ ಸೇತು ಭಾರತಂ, ರೈಲ್ವೇ ಕ್ರಾಸಿಂಗ್ ಮುಕ್ತ ಹೆದ್ದಾರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರ ಮೂಲಭೂತ ಸೌಕರ್ಯಕ್ಕೆ ಸಂಬಂಧಪಟ್ಟ ಎಲ್ಲಾ ಯೋಜನೆಗಳನ್ನೂ ತ್ವರಿತ ಗತಿಯಲ್ಲಿ ಮುಗಿಸಲು ಬದ್ದವಾಗಿದೆ ಎಂದರು.
ಮಾನವನ ದೇಹದಲ್ಲಿ ಅಪಧಮನಿಗಳು ಯಾವ ಪಾತ್ರವನ್ನು ವಹಿಸುತ್ತವೆಯೋ ಹಾಗೆ ಮೂಲಭೂತ ಸೌಕರ್ಯಗಳೂ ರಾಷ್ಟ್ರಕ್ಕೆ ಅಷ್ಟೇ ಮುಖ್ಯ.ಅವುಗಳನ್ನು ಕಾರ್ಯಗತಗೊಳಿಸುವುದು ಮುಖ್ಯ ಎಂದು ಪ್ರಧಾನಿ ಮೋದಿ ಸೇತು ಭಾರತಂ ಯೋಜನೆ ಉದ್ಘಾಟಿಸಿ ಹೇಳಿದರು. ಈ ಸಂದರ್ಭದಲ್ಲಿ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಮೂಲಭೂತ ಸೌಕರ್ಯದ ಕೆಲಸಗಳನ್ನು ಪ್ರಶಂಸಿಸಿದ ಪ್ರಧಾನಿ ನರೇಂದ್ರ ಮೋದಿ, ಒಂದು ದೇಶದ ಅಭಿವೃದ್ಧಿಯಲ್ಲಿ ಮೂಲಭೂತ ಸೌಕರ್ಯ ಅತೀ ಮಹತ್ವದ ಪಾತ್ರ ವಹಿಸಿತ್ತದೆ. ಆ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿಗಾಗಿ ಕೆಲಸಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಹೆದ್ದಾರಿಗಳು ಮಾತ್ರವೇ ಅಲ್ಲದೆ ಐ-ವೇ (ಇಂಟರ್ನೆಟ್ ವೇ) ರೈಲ್ವೇ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಸೇತು ಭಾರತಂ ಯೋಜನೆಯಡಿಯಲ್ಲಿ, ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲೇ ರೈಲು ಹಳಿ ಹಾದು ಹೋಗುವಂತಹ ಕಡೆಗಳಲ್ಲಿ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಜತೆಗೆ ಬ್ರಿಟಿಷರ ಕಾಲದ 1,500 ಸೇತುವೆಗಳನ್ನು ದುರಸ್ತಿಗೊಳಿಸಲಾಗುತ್ತದೆ. ಒಟ್ಟಾರೆ 208 ರೈಲ್ವೇ ಕ್ರಾಸಿಂಗ್ಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸುವ ಮೂಲಕ 2019ರೊಳಗೆ ಹೆದ್ದಾರಿಗಳನ್ನು ರೈಲ್ವೇ ಕ್ರಾಸಿಂಗ್ ರಹಿತಗೊಳಿಸುವ ಗುರಿಯನ್ನು ಸರಕಾರ ಹಾಕಿಕೊಂಡಿದೆ. 208 ಮೇಲ್ಸೇತುವೆಗಳ ಪೈಕಿ ಕರ್ನಾಟಕದಲ್ಲಿ 17 ಸೇತುವೆಗಳು ನಿರ್ಮಾಣವಾಗಲಿವೆ.