BW News Bureau : ರಾಜ್ಯ ಸರ್ಕಾರ ಇನ್ವೆಸ್ಟ್ ಕರ್ನಾಟಕ ಸಮಾವೇಶದ ಹಿನ್ನೆಲೆಯಲ್ಲಿ ಖಾಸಗಿ ಬಸ್, ಕೆಎಸ್ಆರ್ಟಿಸಿ ಹಾಗೂ ಹೊರ ರಾಜ್ಯದ ಎಲ್ಲಾ ಬಸ್ ಗಳಿಗೆ ಬೆಂಗಳೂರು ನಗರ ಪ್ರವೇಶವನ್ನು ನಿರ್ಬಂಧಿಸಿದೆ. ಫೆ. 1ರಿಂದ 10 ದಿನಗಳ ಕಾಲ ಸಂಚಾರ ದಟ್ಟಣೆ ಮತ್ತು ವಾಯುಮಾಲಿನ್ಯದ ನೆಪವೊಡ್ಡಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಫೆ.3 ರಿಂದ 5ವರೆಗೆ ಇನ್ವೆಸ್ಟ್ ಕರ್ನಾಟಕ ಸಮಾವೇಶ ನಡೆಯಲಿದೆ. ಈ ಸಂದರ್ಭದಲ್ಲಿ ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಎಲ್ಲ ಬಸ್ಗಳಿಗೆ ರಾಜಧಾನಿ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ.
ಮೆಜೆಸ್ಟಿಕ್ನಿಂದ ಕಾರ್ಯಾಚರಣೆ ಮಾಡುವ ಸುಮಾರು 2,250 ಬಸ್ಗಳನ್ನು ಪೀಣ್ಯ ಬಸವೇಶ್ವರ ಬಸ್ ನಿಲ್ದಾಣಕ್ಕೆ ಹಾಗೂ ಕಲಾಸಿಪಾಳ್ಯದಿಂದ ಕಾರ್ಯಾಚರಣೆ ಮಾಡುವ 150ರಿಂದ 200 ಬಸ್ಗಳನ್ನು ಮೈಸೂರು ರಸ್ತೆಯ ಸ್ಯಾಟಲೈಟ್ ನಿಲ್ದಾಣಕ್ಕೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ.
ತುಮಕೂರು ರಸ್ತೆಯಿಂದ ನಗರ ಪ್ರವೇಶಿಸುವ ಬಸ್ಗಳು ನೈಸ್ ರಸ್ತೆ ಜಂಕ್ಷನ್, ಮೈಸೂರು ರಸ್ತೆಯಿಂದ ಬರುವ ಬಸ್ಗಳು ನೈಸ್ ರಸ್ತೆ ಜಂಕ್ಷನ್, ಬಳ್ಳಾರಿ ರಸ್ತೆಯಲ್ಲಿ ಯಲಹಂಕ, ಮದ್ರಾಸ್ ರಸ್ತೆಯಲ್ಲಿ ಕೋರಮಂಗಲ ಜಂಕ್ಷನ್, ಹಳೆಯ ಮದ್ರಾಸ್ ರಸ್ತೆಯಲ್ಲಿ ಕೆ.ಆರ್. ಪುರದಲ್ಲಿ ಖಾಸಗಿ ಬಸ್ಗಳು ನಿಲ್ಲಲಿವೆ. ನಗರದ ಹೊರ ಭಾಗಗಳಿಂದ ಬಿಎಂಟಿಸಿ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಲಕ್ಷಾಂತರ ಜನರು ಪ್ರತಿನಿತ್ಯ ಓಡಾಡುವುದರಿಂದ ಸರ್ಕಾರದ ಈ ನಿರ್ಧಾರ ಎಷ್ಟು ಸರಿ ?