Sullia : ಮಕ್ಕಳು ಚಿಕ್ಕವರಾಗಿರುವಾಗಲೇ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗೆ ಪೋಷಕರ ಸಕ್ರಿಯ ಭಾಗವಹಿಸುವಿಕೆ ಅಗತ್ಯ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಮಕ್ಕಳು ಮಾಡಿದ ಸಾಧನೆಯನ್ನು ಪ್ರೋತ್ಸಾಹಿಸಿ, ವಿದ್ಯೆ ಎನ್ನುವುದು ಜ್ಞಾನಕ್ಕಾಗಿ ಇದು ನಿಂತ ನೀರಾಗಬಾರದು. ಸ್ಪರ್ಧಾತ್ಮಕ ಮನೋಭಾವಕ್ಕಿಂತ ಸಹಕಾರ ಮನೋಭಾವ ಅಗತ್ಯ ಎಂದು ಡಾ. ಪಿ.ಆರ್ ಗಣಪತಿ ಮಕ್ಕಳು ತಜ್ಞರು, ನಾರ್ತ್ ಕೆರೊಲಿನಾ, ಯು.ಎಸ್.ಎ ಇವರು ಹೇಳಿದರು.
ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ೨೦ನೇ ಶಾಲಾ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆಂಪಲಿಂಗಪ್ಪನವರು ಮಾತನಾಡಿ, ಸಾಧಕರೇ ಮುಂದಿನ ಜನಾಂಗಕ್ಕೆ ಸ್ಫೂರ್ತಿ. ಮಾತೃ ಭಾಷೆಗೆ ಇರುವ ಶಕ್ತಿ ಯಾವುದಕ್ಕೂ ಇಲ್ಲ. ಮಾತೃ ಭಾಷೆಯ ಸೊಗಡು ಹೃದಯಲ್ಲಿರುತ್ತದೆ. ಇತರ ಭಾಷೆ ನಾಲಿಗೆಯಲ್ಲಿ ಕುಣಿದು ಮತ್ತೆ ತೆರಳುತ್ತದೆ ಆದ್ದರಿಂದ ಮಾತೃಭಾಷೆ ಶಿಕ್ಷಣದ ಬುನಾದಿ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ, ಭಯದಿಂದ ಹೊರತಾಗಿ ಶಿಕ್ಷಣ ದೊರಕಿದಾಗ ಮಕ್ಕಳ ಸಂಪೂರ್ಣ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ. ಅಂತಹ ವಾತಾವರಣವನ್ನು ನಾವು ಇಲ್ಲಿ ನಿರ್ಮಿಸಿದ್ದೇವೆ. ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ಡಾ. ವಿದ್ಯಾಶಾಂಭವ ಪಾರೆ, ನಿರ್ದೇಶಕರಾದ ಶ್ರೀಕರ ದಾಮ್ಲೆ, ಮುಖ್ಯೋಪಾಧ್ಯಾಯಿನಿ ಜಯಲಕ್ಷಿ ದಾಮ್ಲೆ ಉಪಸ್ಥಿತರಿದ್ದರು. ಶ್ರೀಕರ ದಾಮ್ಲೆ ಸ್ವಾಗತಿಸಿ, ಡಾ. ವಿದ್ಯಾಶಾಂಭವ ಪಾರೆ ವಂದಿಸಿದರು. ಜಯಲಕ್ಷ್ಮಿ ದಾಮ್ಲೆ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿ ಸವಿತಾ ಎಂ. ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.