ನವದೆಹಲಿ : ಅಸಹಿಷ್ಣುತೆ ವಿಚಾರದಲ್ಲಿ ದೇಶ ಬಿಡುವ ಬಗ್ಗೆ ಪ್ರಸ್ತಾಪಿಸಿದ್ದ ನಟ ಅಮೀರ್ ಖಾನ್ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗುರುವಾರ ಲೋಕಸಭೆಯ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ತಮ್ಮ ರಾಜಕೀಯ ಮತ್ತು ಸಾಮಾಜಿಕ ಅಭಿಪ್ರಾಯಗಳಿಗೆ ಟೀಕೆಗಳನ್ನು ಎದುರಿಸಿದರೂ ಸಹ ಡಾ.ಬಿಆರ್ ಅಂಬೇಡ್ಕರ್ ಎಂದೂ ಭಾರತ ಬಿಟ್ಟು ಹೋಗುತ್ತೇನೆ ಅಂತ ಹೇಳಿಲ್ಲ. ಡಾ.ಅಂಬೇಡ್ಕರ್ ಸಾಕಷ್ಟು ಅವಮಾನ ಎದುರಿಸಿದ್ದರು. ಆದರೆ ಅವರು ಆ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡಿದ್ದರು. ಆದರೂ ಅವರು ದೇಶದ ಬಗ್ಗೆ ಅಭಿಮಾನದ ದೃಷ್ಟಿಕೋನ ಹೊಂದಿದ್ದರು, ಎಂದಿಗೂ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿಲ್ಲ ಎಂಬುದಾಗಿ ರಾಜನಾಥ್ ಸಿಂಗ್ ಹೇಳಿದ್ದಾರೆ
ಡಾ.ಅಂಬೇಡ್ಕರ್ ಅವರ 125ನೇ ಜನ್ಮ ಜಯಂತಿ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಸಂವಿಧಾನದ ಕುರಿತ ಚರ್ಚೆ ವೇಳೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಮ್ಮ ಭಾಷಣದಲ್ಲಿ ರಾಜನಾಥ್ ಸಿಂಗ ವಿವಾದಾತ್ಮಕವಾಗಿ ಸೇರಿಸಿದ 'ಸಮಾಜವಾದಿ' ಮತ್ತು 'ಜಾತ್ಯತೀತ' ಶಬ್ದಗಳ ಕುರಿತು ಸಹ ಪ್ರಸ್ತಾಪಿಸಿದರು .
ಮೊದಲು ಸಂವಿಧಾನದಲ್ಲಿ 'ಸಮಾಜವಾದಿ' ಮತ್ತು 'ಜಾತ್ಯತೀತ' ಎನ್ನುವ ಶಬ್ದಗಳು ಇರಲಿಲ್ಲ. ಅವುಗಳನ್ನು ಆಮೇಲೆ ಸೀರಿಸಲಾಯಿತು. 1970 ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ 42 ನೇ ತಿದ್ದುಪಡಿಯ ಮೂಲಕ ಈ ಎಅರ್ಡು ಶಬ್ದಗಳನ್ನು ಸೇರಿಸಲಾಯಿತು ಎಂದು ರಾಜ್ನಾಥ್ ಸಿಂಗ್ ಹೇಳಿದರು.
ಸಂವಿಧಾನದಲ್ಲಿರುವ ಪದಗಳು ದುರುಪಯೋಗವಾಗಬಾರದು. ಆದರೆ ಜಾತ್ಯತೀತ ಎಂಬ ಪದ ರಾಜಕೀಯವಾಗಿ ಅತಿ ಹೆಚ್ಚು ದುರುಪಯೋಗವಾಗಿದೆ ಎಂದರು.