ಬೆಂಗಳೂರು : ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಚಾರಿತ್ರ್ಯಹರಣ ಮಾಡುವ ಉದ್ದೇಶದಿಂದ ಹೆಣೆದಿದ್ದ ನಕಲಿ ಸಿಡಿ ಪ್ರಕರಣವನ್ನು ವಾಪಾಸ್ ಪಡೆದ ಸರ್ಕಾರದ ಕ್ರಮಕ್ಕೆ ಬುಧವಾರ ಪ್ರತಿಪಕ್ಷ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಘವೇಶ್ವರ ಶ್ರೀಗಳನ್ನು ಹೋಲುವ ವ್ಯಕ್ತಿಯನ್ನು ಬಳಸಿ ಅಶ್ಲೀಲ ದೃಶ್ಯಗಳಿರುವ ಸಿ.ಡಿ ಸಿದ್ಧಪಡಿಸಿದವರ ವಿರುದ್ಧ ಪ್ರಕರಣ ಕೈಬಿಡಲು ಸರ್ಕಾರ ತೀರ್ಮಾನಿಸಿದ್ದು ಏಕೆ ಎಂದು ಜೆಡಿಎಸ್ನ ಬಸವರಾಜ ಹೊರಟ್ಟಿ ವಿಧಾನ ಪರಿಷತ್ತಿನಲ್ಲಿ ಬುಧವಾರ ಪ್ರಶ್ನಿಸಿದರು.
ರಾಘವೇಶ್ವರ ಶ್ರೀಗಳ ಬಗ್ಗೆ ಅಶ್ಲೀಲ ಸಿಡಿ ಮಾಡಿದವರ ಪರ ಸರ್ಕಾರ ನಿಂತಿದೆಯೇ? ಯಾರನ್ನು ರಕ್ಷಣೆ ಮಾಡಲು ಹೊರಟಿದ್ದೀರಿ? ಪೊಲೀಸರನ್ನು ಬಳಸಿಕೊಂಡು ಯಾರನ್ನು ಬ್ಲ್ಯಾಕ್ ಮೇಲ್ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ? ರಾಘವೇಶ್ವರ ಶ್ರೀಗಳನ್ನು ಜೈಲಿಗೆ ಹಾಕಲೇಬೇಕು ಎಂದು ತೀರ್ಮಾನಿಸಿಯೇ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿ ಅವರ ವಿರುದ್ಧ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ. ಕೋರ್ಟ್ ಕೂಡ ಇದನ್ನು ಎತ್ತಿ ಹಿಡಿದಿದೆ. ಹೀಗಿದ್ದರೂ ಆರೋಪಿಗಳ ವಿರುದ್ಧದ ಪ್ರಕರಣ ಹಿಂಪಡೆಯಲಾಗಿದೆ ಎಂದರೆ ಸರ್ಕಾರ ನಕಲಿ ಸಿಡಿ ಮಾಡಿದವರ ಪರವಾಗಿದೆಯೇ? ಎಂದು ಪ್ರಶ್ನಿಸಿದರು.
'ಈ ಸಿಡಿಯಲ್ಲಿ ಇರುವ ದೃಶ್ಯಾವಳಿ ನಕಲಿಯಲ್ಲ ಎಂದು ಹೇಳಿ ರಾಘವೇಶ್ವರ ಶ್ರೀಗಳ ವಿರುದ್ಧ ಇನ್ನೊಂದು ಪ್ರಕರಣ ದಾಖಲಿಸುವ ಪಾಪದ ಕೆಲಸವನ್ನು ಸರ್ಕಾರ ಮಾಡಬಾರದು’ ಎಂದು ಈಶ್ವರಪ್ಪ ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಭಾನಾಯಕ ಎಸ್.ಆರ್.ಪಾಟೀಲ್, ಸರ್ಕಾರ ತಪ್ಪು ಮಾಡಿದ ಯಾರನ್ನೂ ರಕ್ಷಿಸುವುದಿಲ್ಲ. ಗುರುವಾರ ಗೃಹ ಸಚಿವರ ಮೂಲಕ ಈ ವಿಚಾರಕ್ಕೆ ಸೂಕ್ತ ಉತ್ತರ ಕೊಡಿಸುವುದಾಗಿ ಹೇಳಿದರು.