B T M Layout : ಬೆಂಗಳೂರಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ಸಿಸಿಬಿ ಪೊಲೀಸರು ಕುಖ್ಯಾತ ಭೂಗತ ಪಾತಕಿ ಛೋಟಾ ಶಕೀಲ್ ಸಹಚರನೊಬ್ಬನನ್ನು ಬಂಧಿಸಿದ್ದಾರೆ.
ಬಿಟಿಎಂ ಲೇ ಔಟ್ ಸಮೀಪದ ಬಿಸ್ಮಿಲ್ಲಾ ನಗರದ 28 ವರ್ಷದ ಸೈಯದ್ ನಿಯಾಮತ್ ಅಲಿಯಾಸ್ ರೆಹಮಾನ್ ಬಿನ್ ಸೈಯದ್ ಜಿಯಾ ಬಂಧಿತ ಆರೋಪಿ. ಛೋಟಾ ಶಕೀಲ್ ಸೂಚನೆ ಮೇಲೆ ಈತ ನಗರದಲ್ಲಿ ಪ್ರಮುಖ ಮುಖಂಡರೊಬ್ಬರನ್ನು ಹತ್ಯೆ ಗೈದು ಬಳಿಕ ಕೋಮು ಗಲಭೆ ಸೃಷ್ಠಿಸಲು ಒಳಸಂಚು ರೂಪಿಸಿದ್ದ. ಈ ಕುರಿತು ಲಭ್ಯವಾದ ಖಚಿತ ಮಾಹಿತಿ ಆಧರಿಸಿ ಆತನನ್ನು ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.
ಐದಾರು ವರ್ಷಗಳಿಂದ ರೆಹಮಾನ್ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದು, ಆತನ ವಿರುದ್ಧ ಕೊಲೆ, ದರೋಡೆ ಹಾಗೂ ಕೋಮು ಗಲಭೆಗಳು ಸೇರಿದಂತೆ ಇನ್ನಿತರ ಪ್ರಕರಣಗಳು ತಿಲಕನಗರ, ಪುಲಿಕೇಶಿ ನಗರ ಹಾಗೂ ಶಿವಾಜಿನಗರ ಸೇರಿ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.
ಶಿವಾಜಿನಗರದ ರೌಡಿ ಬ್ರಿಗೇಡ್ ಆಜಂ ಸಹಚರನಾಗಿದ್ದ ರೆಹಮಾನ್, ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲು ಸೇರಿದ್ದಾಗ ಛೋಟಾ ಶಕೀಲ್ ತಂಡದ ಸಂಪರ್ಕಕ್ಕೆ ಬಂದಿದ್ದ. ಬಳಿಕ ಆತನ ನಿರ್ದೇಶದಂತೆ ನಗರದಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.