ಬೆಂಗಳೂರು : ಟರ್ಕಿ ದೇಶದ ಗಡಿ ಮೂಲಕ ಐಸಿಸ್ ಉಗ್ರರ ಹಿಡಿತದಲ್ಲಿರುವ ಸಿರಿಯಾ ದೇಶಕ್ಕೆ ತೆರಳಲು ಯತ್ನಿಸುತ್ತಿದ್ದ 5 ಮಕ್ಕಳು ಒರ್ವ ಮಹಿಳೆ ಸೇರಿ 9 ಮಂದಿಯನ್ನು ಟರ್ಕಿ ಅಧಿಕಾರಿಗಳ ತಂಡ ಭಾರತಕ್ಕೆ ಗಡಿಪಾರು ಮಾಡಿದೆ.
ಗಡಿಪಾರಾದ 9 ಮಂದಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಸಿಸಿಬಿ ಪೊಲೀಸರ ತಂಡ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದೆ. ಚೆನ್ನೈ ಮೂಲದ 46 ವರ್ಷದ ಮಹ್ಮದ್ ಅಬ್ದುಲ್ ಅಹದ್), ಈತನ ಪತ್ನಿ ಹಾಗೂ ಐವರು ಮಕ್ಕಳು, ತೆಲಂಗಾಣ ರಾಜ್ಯ ಕಮ್ಮಮ್ ಜಿಲ್ಲೆಯ 24 ವರ್ಷದ ಜವೀದ್ ಬಾಬಾ, ಕರ್ನಾಟಕದ ಹಾಸನ ಮೂಲದ 24 ವರ್ಷದ ಇಬ್ರಾಹಿಂ ನೌಫಲ್ ಟರ್ಕಿಯಿಂದ ಗಡಿಪಾರಾದವರು.
2014ರ ಡಿಸೆಂಬರ್ 24ರಂದು 9 ಮಂದಿ, ಪ್ರವಾಸಿ ವೀಸಾ ಮೇಲೆ ಬೆಂಗಳೂರು ವಿಮಾನ ನಿಲ್ದಾಣದಿಂದ ಟರ್ಕಿಯ ಇಸ್ತಾಂಬುಲ್ಗೆ ತೆರಳಿದ್ದರು. ಆದರೆ, 9 ಮಂದಿ ಪ್ರವಾಸದ ಬದಲು ಟರ್ಕಿ-ಸಿರಿಯಾ ಗಡಿ ಮೂಲಕ ಸಿರಿಯಾಗೆ ತೆರಳಲು ಯತ್ನಿಸುತ್ತಿದ್ದರು. ಟರ್ಕಿ ಗಡಿ ಭದ್ರತಾ ಅಧಿಕಾರಿಗಳ ತಂಡ 9 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು. ಅಲ್ಲದೇ ಐಸಿಸ್ ಸೇರಲು ಹೊರಟಿದ್ದರು ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಎಲ್ಲರನ್ನು ಭಾರತಕ್ಕೆ ಗಡಿಪಾರು ಮಾಡಿದ್ದರು.
ಟರ್ಕಿ ಅಧಿಕಾರಿಗಳ ತಂಡ ಭಾರತದ ಗುಪ್ತಚರ ಸಂಸ್ಥೆ ಹಾಗೂ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದರು. ಕೇಂದ್ರದ ಅಧಿಕಾರಿಗಳು ಬೆಂಗಳೂರು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. 9 ಮಂದಿ ಜ.30ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಸಿಸಿಬಿ ಪೊಲೀಸರ ತಂಡ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿವೆ.