ನವದೆಹಲಿ : ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ತಿಂದರೆಂಬ ವದಂತಿಯಿಂದ ಆಕ್ರೋಶಿತರಾದ ಗುಂಪೊಂದು ಒಬ್ಬ ವ್ಯಕ್ತಿಯನ್ನು ಸಾಯಿಸಿದ ಕೆಲವು ದಿನದ ನಂತರ ಬುಧವಾರ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್ ಅವರು ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಯತ್ನಿಸುವವರ ವಿರುದ್ಧ ಸಾಧ್ಯವಿರುವ ಅತ್ಯಂತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ದೆಹಲಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಜನಾಥ್ ಸಿಂಗ್, ಪರ್ತಕರ್ತರೊಂದಿಗೆ ಮಾತನಾಡುತ್ತ, ರಾಜ್ಯ ಸರಕಾರವೇ ಇರಲಿ, ಕೇಂದ್ರ ಸರಕಾರವೇ ಇರಲಿ, ದೇಶದಲ್ಲಿ ಕೋಮು ಸಾಮರಸ್ಯವನ್ನು ಹಾಳು ಮಾಡುವವರ ವಿರುದ್ಧ ಸಾಧ್ಯವಿರುವ ಗರಿಷ್ಠ ಕಠಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು' ಎಂದು ಹೇಳಿದರು.
ದಾದ್ರಿ ಘಟನೆಯ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಿದ್ದ ರಾಜನಾಥ್ ಸಿಂಗ್ ಅವರು, ಇದೊಂದು ಅತ್ಯಂತ ದುರದೃಷ್ಟಕರ ಘಟನೆ, ಜನರು ಯಾವತ್ತೂ ಕೋಮು ಸೌಹಾರ್ದತೆಯನ್ನು ಕಾಪಿಡಬೇಕು ಎಂದು ಹೇಳಿದರು.
ದಾದ್ರಿಯ ದೇವಳವೊಂದರ ಧ್ವನಿವರ್ಧಕದಲ್ಲಿ ಮುಸ್ಲಿಂ ಕುಟುಂಬವೊಂದು ಗೋಮಾಂಸ ಭಕ್ಷಣೆ ಮಾಡಿದೆ ಮತ್ತು ಗೋಮಾಂಸವನ್ನು ತಮ್ಮ ಮನೆಯಲ್ಲಿ ಶೇಖರಿಸಿಟ್ಟುಕೊಂಡಿದೆ ಎಂದು ಮಾಡಲಾದ ಘೋಷಣೆಯನ್ನು ಕೇಳಿಕೊಂಡು ಉದ್ರಿಕ್ತರಾದ ಸುಮಾರು 200 ಜನರ ಗುಂಪೊಂದು ಕಳೆದ ವಾರ ಇಖ್ಲಾಕ್ ಅವರನ್ನು ಅವರ ಮನೆಯಿಂದ ಹೊರಗೆಳೆದು ಹೊಡೆದು ಸಾಯಿಸಿತ್ತು.