BW News Bureau : ಬಿಬಿಎಂಪಿ ಅಧಿಕಾರದ ಚುಕ್ಕಾಣಿಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತು ಮಾತುಕತೆ ಬುಧವಾರ ಬಿರುಸುಗೊಂಡಿದ್ದು, ಈ ಸಂಬಂಧ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪದ್ಮನಾಭ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ ಅವರು, ಬಿಬಿಎಂಪಿ ಅಧಿಕಾರದ ಚುಕ್ಕಾಣಿಗಾಗಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿಗೆ ಯಾವುದೇ ಷರತ್ತು ವಿಧಿಸಿಲ್ಲ. ಈ ಮೈತ್ರಿ ಬಿಬಿಎಂಪಿಗೆ ಮಾತ್ರ ಸೀಮಿತ. ಮುಖ್ಯಮಂತ್ರಿ ಸಿದ್ದರಾಮಯ್ಯ, (ಕೆಪಿಸಿಸಿ ಅಧ್ಯಕ್ಷ) ಪರಮೇಶ್ವರ್ ಮತ್ತು (ಜೆಡಿಎಸ್ ರಾಜ್ಯಾಧ್ಯಕ್ಷ) ಕುಮಾರಸ್ವಾಮಿ ಕುಳಿತು ಚರ್ಚಿಸಲು ಪರಮೇಶ್ವರ್ ಅವರಿಗೆ ಹೇಳಿದ್ದೇನೆ, ಮೈತ್ರಿಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಿ ಎಂದು ದೇವೇಗೌಡ ಹೇಳಿದರು. ಬಿಬಿಎಂಪಿ ಅಲ್ಲಿ ಜೆಡಿಎಸ್ ನ 21 ಮತವಿದೆ. ಸ್ಥಾಯಿ ಸಮಿತಿಗಳಲ್ಲಿ ಸಂಖ್ಯೆಯಾಧರಿಸಿ ಸ್ಥಾನಮಾನ ಸಿಗಲಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ತಮ್ಮನ್ನು ಭೇಟಿಯಾಗಲಿದ್ದಾರೆಯೇ ಎಂದು ಪತ್ರಕರ್ತರು ಕೇಳಿದಾಗ, ಸಿಎಂ ಭೇಟಿಯ ಬಗ್ಗೆ ನನಗೇನೂ ಮಾಹಿತಿ ಇಲ್ಲ ಎಂದು ದೇವೇಗೌಡ ಉತ್ತರಿದರು.
ದೇವೇಗೌಡರ ಈ ಸುದ್ದಿಗೋಷ್ಠಿಗೂ ಮೊದಲು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತು ಚರ್ಚೆ ನಡೆಸಿದ್ದರು. ಕಾಂಗ್ರೆಸ್ ಮುಖಂಡ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಜೆಡಿಎಸ್ ಶಾಸಕರಾದ ಅಖಂಡ ಶ್ರೀನಿವಾಸ್, ಜಮೀರ್ ಅಹ್ಮದ್ ಮತ್ತು ಶರವಣ ಕೂಡಾ ಮಾತುಕತೆ ವೇಳೆ ಹಾಜರಿದ್ದರು.
ಇದಕ್ಕೂ ಮೊದಲು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾಂಗ್ರೆಸ್ ಮುಖಂಡ ಹರಿಪ್ರಸಾದ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಮಹತ್ವದ ಮಾತುಕತೆ ನಡೆಸಿದ್ದರು.