ನವದೆಹಲಿ : ನಿವೃತ್ತ ಯೋಧರ ಬಹುವರ್ಷಗಳ ಬೇಡಿಕೆಯಾದ, 'ಏಕ ಶ್ರೇಣಿ ಏಕ ಪಿಂಚಣಿ'ಯನ್ನು ಜಾರಿಗೆ ತರಲು ಸರಕಾರ ಬದ್ಧವಾಗಿದೆ. ಆದರೆ ಪಿಂಚಣಿಯನ್ನು ಪ್ರತಿವರ್ಷ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಳಿ ಹೇಳಿದ್ದಾರೆ.
ಸರಕಾರ ಸೇವೆಯಿಂದ 35-38 ವಯಸ್ಸಿನಲ್ಲೇ ನಿವೃತ್ತರಾಗುವ ಯೋಧರ ಯೋಗಕ್ಷೇಮವನ್ನು ರಕ್ಷಿಸಲು ಬದ್ಧವಾಗಿದೆ. ಅವರಿಗೆ ಹೆಚ್ಚಿನ ಪಿಂಚಣಿ ಕೊಡುವ ಬಗ್ಗೆ ಸರಕಾರ ಚಿಂತಿಸುತ್ತಿದೆ. ಆದರೆ ವಾರ್ಷಿಕವಾಗಿ ಪಿಂಚಣಿಯನ್ನು ಪರಿಷ್ಕರಿಸಲು
ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೆ, ಪಿಂಚಣಿಯನ್ನು ಪ್ರತಿವರ್ಷ ಪರಿಷ್ಕರಿಸುವ ಪದ್ಧತಿ ಪ್ರಪಂಚದಲ್ಲಿ ಇನ್ನೆಲ್ಲೂ ಜಾರಿಯಲ್ಲಿಲ್ಲ ಎಂದು ಸಚಿವರು ಹೇಳಿದರು.
'ಏಕ ಶ್ರೇಣಿ ಏಕ ಪಿಂಚಣಿ ಬಗ್ಗೆ ನನ್ನದೇ ಆದ ಸೂತ್ರವಿದೆ ಇದೆ. ಬೇರೆಯವರಿಗೆ ಬೇರೆಯದೇ ಆದ ಸೂತ್ರವಿರಬಹುದು. ಆದರೆ ಅದು ತರ್ಕಬದ್ಧವಾಗಿರಬೇಕು ಮತ್ತು ನ್ಯಾಯಯುತವಾಗಿರಬೇಕು. ಪ್ರತಿ ತಿಂಗಳು ಅಥವಾ ಪ್ರತಿ ವರ್ಷ ಪರಿಷ್ಕರಣೆಯಾಗುವ ಪಿಂಚಣಿ ಪದ್ಧತಿ ಜಾರಿಗೆ ತರಲು ಸಾಧ್ಯವಿಲ್ಲ' ಎಂದು ಜೇಟ್ಲಿ ಹೇಳಿದರು.
'ನಾನು ಆರ್ಥಿಕತೆ ಬಗ್ಗೆ ವಿವೇಕದಿಂದ ಕೆಲಸಮಾಡಬೇಕಿದೆ ಮತ್ತು ಸದಾ ಜಾಗೃತನಾಗಿರಬೇಕಾಗುತ್ತದೆ. ಆದ್ದರಿಂದ ನನ್ನದು ಒಬ್ಬ ಗೃಹಿಣಿಯ ಜವಾಬ್ದಾರಿಯಂತಿರುತ್ತದೆ. ಆದಾಯದ ಪ್ರತಿ ರೂಪಾಯಿಯನ್ನು ಲೆಕ್ಕ ಇಟ್ಟುಕೊಂಡು ಅದಕ್ಕೆ ಸರಿಯಾಗಿ ಖರ್ಚು ಮಾಡಬೇಕು. ಆದಾಯಕ್ಕಿಂತ ಹೆಚ್ಚು ಖರ್ಚುಮಾಡತೊಡಗಿದರೆ ಸಾಲದ ಸುಳಿಗೆ ಸಿಲುಕಿ ಆರ್ಥಿಕ ಅಶಿಸ್ತಿಗೆ ದಾರಿಯಾಗುತ್ತದೆ' ಎಂದು ಅವರು ಮಾಧ್ಯಮದೊಂದಿಗೆ ಮಾತನಾಡುತ್ತ ಹೇಳಿದರು.
ನಿವೃತ್ತ ಯೋಧರು ಕಳೆದ 78 ದಿನಗಳಿಂದ ದೆಹಲಿಯ ಜಂತರ್ ಮಂಥರ್ ನಲ್ಲಿ ಏಕ ಶ್ರೇಣಿ ಏಕ ಪಿಂಚಣಿ ಜಾರಿಗಾಗಿ ಹಾಗೂ ಅದರ ವಾರ್ಷಿಕ ಪರಿಷ್ಕರಣೆಗಾಗಿ ಧರಣಿ ನಡೆಸುತ್ತಿದ್ದಾರೆ.