ಅಮೇಠಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಮೇಠಿಯಲ್ಲಿ ಭಾನುವಾರ, ಆ.23 ನಡೆಯಲಿರುವ ಬಿಜೆಪಿಯ 'ಧಿಕ್ಕಾರ ಸಭೆ'ಯ ನೇತೃತ್ವವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ವಹಿಸಲಿದ್ದಾರೆ.
ಲೋಕಸಭಾ ಮುಂಗಾರು ಅಧಿವೇಶನವನ್ನು ನಿರಂತರವಾಗಿ ತಡೆಗಟ್ಟಿ ಕಲಾಪ ನಡೆಯಲು ಬಿಡದೆ ಅತ್ಯಂತ ಪ್ರಮುಖವಾದ ಸರಕು ಮತ್ತು ಸೇವಾ ತೆರಿಗೆ ಮಸೂದೆ ಹಾಗೂ ಇತರ ಮಸೂದೆಗಳಿಗೆ ಅನುಮೋದನೆ ಸಿಗದಂತೆ ಮಾಡಿದ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ವಿರುದ್ಧ ಆ ಪಕ್ಷಕ್ಕೆ ಸೇರಿದ ಎಲ್ಲಾ ಸಂಸದರ ಕ್ಷೇತ್ರಗಳಲ್ಲಿ ಸರಣಿ 'ಧಿಕ್ಕಾರ ಸಭೆ'ಗಳ ಮೂಲಕ ಬಿಜೆಪಿ ಪ್ರತಿಭಟನೆಯನ್ನು ನಡೆಸಲು ಉದ್ದೇಶಿಸಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸೆಣಸಿ ಸೋತ ಸ್ಮೃತಿ ಇರಾನಿ ಈಗಲೂ ಅಮೇಠಿ ಕ್ಷೇತ್ರದೊಂದಿಗೆ ತಮ್ಮ ಬಾಂಧವ್ಯವನ್ನು ಮುಂದುವರಿಕೊಂಡು ಬಂದಿದ್ದಾರೆ. ಸ್ಮೃತಿ ಚುನಾವಣೆಯ ನಂತರವೂ ಹಲವಾರು ಬಾರಿ ಅಮೇಠಿಗೆ ಭೇಟಿ ನೀಡಿ ಅಲ್ಲಿಯ ಜನರ ಸಂಪರ್ಕ ಉಳಿಸಿಕೊಂಡಿದ್ದಾರೆ.
ಧಿಕ್ಕಾರ ಸಭೆಯ ನೇತೃತ್ವ ವಹಿಸಲಿರುವ ಸ್ಮೃತಿ ಅವರಿಗೆ ನಾಲ್ವರು ಸಂಸದರು ಸೇರಿದಂತೆ ಉತ್ತರ ಪ್ರದೇಶದ ಬಿಜೆಪಿ ನಾಯಕರೂ ಸಾಥ್ ನೀಡಲಿದ್ದಾರೆ.
ಕೇಂದ್ರ ಅಂಕಿ-ಅಂಶಗಳ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂದಿಯವರ ಕ್ಷೇತ್ರವಾದ ರಾಯ್ ಬರೇಲಿಯಲ್ಲಿ ಆಯೋಜಿಸಲಾದ ಇಂಥದೇ ಪ್ರತಿಭಟನಾ ಸಭೆಯ ನೇತೃತ್ವ ವಹಿಸಲಿದ್ದಾರೆ. ಪ್ರಸ್ತುತ ಉತ್ತರ ಪ್ರದೇಶದ ಗರ್ ಗಾಂವ್ ಕ್ಷೇತ್ರದ ಬಿಜೆಪಿ ಸಂಸದರಾದ ಸಿಂಗ್ 2014ರ ಸಾರ್ವತ್ರಿಕ ಚುನಾವಣೆಗೆ ಮುಂಚೆ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದರು.
ಲೋಕಸಭೆಯ ಎಲ್ಲಾ 44 ಕಾಂಗ್ರೆಸ್ ಸಂಸದರು ಮತ್ತು ಎಡ ಪಕ್ಷಗಳ 9 ಸಂಸದರ ಕ್ಷೇತ್ರಗಳಲ್ಲಿ ಪ್ರತಿಭಟನೆ ಹಾಗೂ ಧಿಕ್ಕಾರ ಸಭೆಗಳನ್ನು ನಡೆಸಲು ಬಿಜೆಪಿ ಉದ್ದೇಶಿಸಿದ. ಈ ಬಗ್ಗೆ ಬಿಜೆಪಿ ನಾಯಕತ್ವ ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನವಾದ ಆ.13ರಂದು ನಿರ್ಧಾರ ತೆಗೆದುಕೊಂಡಿತ್ತು.