ನವದೆಹಲಿ : ಒಂದೆಡೆ ಶಾಂತಿ ಮಂತ್ರ ಜಪಿಸುತ್ತ ಇನ್ನೊಂದೆಡೆ ಉಭಯ ದೇಶಗಳ ಮಧ್ಯೆ ಮಾತುಕತೆ ವಿಫಲಗೊಳಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನೂ ಪಾಕಿಸ್ತಾನ ಮಾಡುತ್ತಿದೆ.
ಆ.23ರಂದು ಭಾರತದ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನದ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಸರ್ತಾಜ್ ಅಝಿಝ್ ದೆಹಲಿಗೆ ಬರಲಿದ್ದು, ಈ ಸಂದರ್ಭದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಅಝಿಝ್ ಜೊತೆ ಮಾತುಕತೆಗೆ ಪಾಕಿಸ್ತಾನದ ಹೈ ಕಮಿಷನರ್ ಅಬ್ದುಲ್ ಬಸಿತ್ ಆಹ್ವಾನಿಸಿದ್ದಾರೆ.
ಟೈಮ್ಸ್ ನೌ ವರದಿಯ ಪ್ರಕಾರ, ಸೈಯದ್ ಅಲಿ ಶಾ ಗೀಲಾನಿ, ಮಿರ್ವೈಝ್ ಉಮರ್ ಫಾರೂಕ್ ಮತ್ತು ಯಾಸಿನ್ ಮಲಿಕ್ ಸೇರಿದಂತೆ ಒಂದು ಡಜನ್ ಗೂ ಮಿಕ್ಕಿ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಎನ್.ಎಸ್.ಎ ಮಾತುಕತೆಗೂ ಮುನ್ನ ಅಝಿಝ್ ಜೊತೆಗೆ ಮಾತುಕತೆಗೆ ಆಹ್ವಾನಿಸಲಾಗಿದೆ.
ಈ ಮಧ್ಯೆ ಮಂಗಳವಾರ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜ.ರಹೀಲ್ ಶರೀಫ್ ಮತ್ತು ಐ.ಎಸ್.ಐ. ಮುಖ್ಯಸ್ಥ ರಿಜ್ವಾನ್ ಅಖ್ತರ್ ಭೇಟಿ ಮಾಡಿದ್ದಾರೆ. ಪ್ರಧಾನಿಯ ರಾಷ್ಟ್ರೀಯ ರಕ್ಷಣಾ ಹಾಗೂ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಝಿಝ್ ಅವರ ದೆಹಲಿ ಭೇಟಿ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಇದಕ್ಕೂ ಮೊದಲು ಉಭಯ ದೇಶಗಳ ಮಧ್ಯೆ ನಡೆಯುವ ಎನ್.ಎಸ್.ಎ. ಸ್ಥರದ ಮಾತುಕತೆಯ ಕಾರ್ಯಸೂಚಿ ಬಗ್ಗೆ ನವಾಜ್ ಶರೀಫ್ ಉಛ್ಚ ಮಟ್ಟದ ಸಭೆಯೊಂದನ್ನು ನಡೆಸಿದರು.
ಕಳೆದ ವರ್ಷ ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ನಡುವೆ ನಿಗದಿಯಾಗಿದ್ದ ಮಾತುಕತೆಯನ್ನು ಪಾಕಿಸ್ತಾನದ ಹೈ ಕಮಿಷನರ್ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಮಾತುಕತೆಗೆ ಅಹ್ವಾನಿಸಿದ ಹಿನ್ನಲೆಯಲ್ಲಿ ಭಾರತ ಸರಕಾರ ರದ್ದುಗೊಳಿಸಿತ್ತು.
ಕಳೆದ ತಿಂಗಳು ರಷ್ಯಾದ ಉಫಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ನವಾಜ್ ಶರೀಫ್ ಭೇಟಿಯ ಸಂದರ್ಭದಲ್ಲಿ ಎನ್.ಎಸ್.ಎ. ಸ್ಥರದ ಮಾತುಕತೆಗೆ ಉಭಯ ದೇಶಗಳ ಪ್ರಧಾನಿಗಳು ಸಮ್ಮತಿಸಿದ್ದರು ಹಾಗೂ, ಇದಕ್ಕೆ ಆ.23-24 ದಿನಾಂಕವನ್ನು ಭಾರತ ಸೂಚಿಸಿತ್ತು.
ಉಫಾದಲ್ಲಿ ಬಿಡುಗಡೆಗೊಳಿಸಿದ ಜಂಟಿ ಹೇಳಿಕೆಯಲ್ಲಿ, ಎನ್.ಎಸ್.ಎ. ಮಾತುಕತೆಯಲ್ಲಿ ಉಗ್ರವಾದಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ಹೇಳಲಾಗಿತ್ತು.
ಇತ್ತೀಚೆಗೆ ಪಂಜಾಬ್ ನ ಗುರುದಾಸ್ ಪುರ ಹಾಗೂ ಉಧಾಂಪುರದಲ್ಲಿ ಶಂಕಿತ ಪಾಕಿಸ್ತಾನಿ ಉಗ್ರರು ನಡೆಸಿದ ದಾಳಿಯ ಬಗ್ಗೆ ಭಾರತ ತನ್ನ ಆತಂಕವನ್ನು ಖಡಕ್ ಭಾಷೆಯಲ್ಲಿ ಎನ್.ಎಸ್.ಎ ಮಾತುಕತೆ ವೇಳೆ ಪಾಕಿಸ್ತಾನಕ್ಕೆ ತಿಳಿಸಲಿದೆ ಎನ್ನಲಾಗಿದೆ.
ಈ ಮಧ್ಯೆ, ಭಾರತ-ಪಾಕಿಸ್ತಾನಗಳ ಗಡಿ ಭಾಗದಲ್ಲಿ ನಿರಂತರವಾಗಿ ಪಾಕಿಸ್ತಾನ ಸೇನೆ ಕದನ ವಿರಾಮದ ಉಲ್ಲಂಘನೆ ಮಾಡುತ್ತಿರುವ ಹಿನ್ನಲೆಯಲ್ಲಿ ಎನ್.ಎಸ್.ಎ. ಮಾತುಕತೆಯನ್ನು ರದ್ದುಗೊಳಿಸಬೇಕೆಂದು ಕಾಂಗ್ರೆಸ್ ಸೇರಿದಂತೆ ಕೆಲವು ಬಿಜೆಪಿ ಮುಖಂಡರೂ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.