ಮಸ್ದಾರ್ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಯುಎಇ ನ ಪ್ರಮುಖ ವ್ಯಾಪಾರಸ್ಥರಿಗೆ ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಗ್ರಹಿಸಿ, ಭಾರತದಲ್ಲಿ ಪ್ರಸ್ತುತ 1 ಟ್ರಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಅವಕಾಶವಿದೆ ಎಂದು ತಿಳಿಸಿದರು.
ಇಂಗಾಲ ಶೂನ್ಯ ನಗರ, ಮಸ್ದಾರ್ ನಲ್ಲಿ ಹೂಡಿಕೆದಾರರ ಸಮಾವೇಶದಲ್ಲಿ ಅವರು ಮಾತನಾಡುತ್ತ ಈ ವಿಷಯ ತಿಳಿಸಿದರು. ಭಾರತ-ಯುಎಇ ಮಧ್ಯೆ ಪ್ರತಿವಾರ ಸುಮಾರು 700 ವಿಮಾನಗಳು ಹಾರಾಟ ನಡೆಸಿದರೂ ಭಾರತದ ಪ್ರಧಾನಿ ಭೇಟಿಗೆ 34 ವರ್ಷ ತೆಗೆದುಕೊಂಡಿತು ಎಂದು ಹೇಳಿದ ಪ್ರಧಾನಿ ಮೋದಿ, ಇನ್ನೆಂದೂ ಈ ರೀತಿ ಆಗುವುದಿಲ್ಲ ಎಂದು ನಾನು ಭರವಸೆ ಕೊಡುತ್ತೇನೆ ಎಂದು ಹೇಳಿದರು.
'ಭಾರತದ ಕೃಷಿ ಕ್ಷೇತ್ರದಲ್ಲಿ ಶೀತಲ ದಾಸ್ತಾನು ನೆಟ್ವರ್ಕ್ ಮತ್ತು ಗೋದಾಮು ನೆಟ್ವರ್ಕ್ ನ ಅವಶ್ಯಕತೆ ಇದೆ, ಅಲ್ಲಿ ಯುಎಇ ವ್ಯಾಪಾರಸ್ಥರಿಗೆ ಅನುಕೂಲವಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ವಸತಿ ಕ್ಷೇತ್ರದಲ್ಲಿಯೂ ಸಹ ಯುಎಇ ಬಂಡವಾಳ ಹೂಡಿಕೆದಾರರಿಗೆ ಭಾರತದಲ್ಲಿ ವಿಪುಲ ಅವಕಾಶವಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ಯುಎಇ ಬಂಡವಾಳಶಾಹಿಗಳು ಈಗ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ತಮ್ಮ ವಾಣಿಜ್ಯ ಸಚಿವರನ್ನು ಯು.ಎಸ್.ಇ ಗೆ ಶೀಘ್ರದಲ್ಲೇ ಕಳಿಸುವುದಾಗಿ ಪ್ರಧಾನಿ ಭರವಸೆ ನೀಡಿದರು.
ಮಸ್ದಾರ್ ನಲ್ಲಿ ಹೂಡಿಕೆದಾರರ ಸಮಾವೇಶವೇಶಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಯಂಚಾಲಿತ ಕಾರಿನಲ್ಲಿ ಸವಾರಿ ಮಾಡಿದರು. ಇದು ಸೌರ ಶಕ್ತಿಯ ಮೂಲಕ ಲಿಥಿಯಂ ಬ್ಯಾಟರಿಗಳಿಂದ ಚಲಿಸುತ್ತದೆ ಮತ್ತು ಪ್ರಯಾಣದ ಮಾರ್ಗದರ್ಶನಕ್ಕಾಗಿ ಸಾಫ್ಟ್ವೇರ್ ಅನ್ನು ಉಪಯೋಗಿಸುತ್ತದೆ.
ಪ್ರಧಾನಿ ಮೋದಿ ಈ ಕಾರಿನ ಸವಾರಿಯನ್ನು ನೋಡಲು ನೆರೆದಿದ್ದ ಉತ್ಸಾಹಿ ಭಾರತೀಯರಿಗೆ ಕೈಬೀಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನಾಗರಾಭಿವೃದ್ಧಿ ಮತ್ತು ಮುಂದಿನ ಪೀಳಿಗೆಯ ನಗರೀಕರಣದ ಬಗ್ಗೆ ಮಾತುಕತೆ ನಡೆಸಿದರು. ಅವರು ಮಸ್ದಾರ್ ನಗರದ ವಾಸ್ತುಶಿಲ್ಪಿಗಳನ್ನೂ ಸಹ ಭೇಟಿ ಮಾಡಿದರು ಎಂದು ಅವರ ಕಚೇರಿ ಟ್ವೀಟ್ ನಲ್ಲಿ ತಿಳಿಸಲಾಗಿದೆ.
ಸೋಮವಾರ ಸಂಜೆ 6.30ಕ್ಕೆ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಸುಮಾರು 50000 ಭಾರತೀಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.