ಗಯಾ, ಬಿಹಾರ : ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್.ಜೆ.ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಮೈತ್ರಿ ಕೂಟದ ವಿರುದ್ಧ ತೀವ್ರ ವಾಕ್ ಪ್ರಹಾರ ಮಾಡಿದ್ದಾರೆ.
ಭಾನುವಾರ, ಆ.8ರಂದು ಬಿಹಾರದ ಗಯಾದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿ, ಬಿಹಾರದಲ್ಲಿ ಜಂಗಲ್ ರಾಜ್ ಭಾಗ್-2 ಅಧಿಕಾರಕ್ಕೆ ಬಂದರೆ ಬಿಹಾರ ಅವನತಿ ಹೊಂದುವುದು ನಿಶ್ಚಿತ ಎಂದು ಮತದಾರರನ್ನು ಎಚ್ಚರಿಸಿದ್ದಾರೆ. ಅಲ್ಲದೆ ಆರ್.ಜೆ.ಡಿ. ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮೇವು ಹಗರಣದಲ್ಲಿ ಅಪರಾಧಿಯಾಗಿ ಜೈಲುವಾಸ ಅನುಭವಿಸಿದ್ದನ್ನು ಸಹ ಅವರು ಪ್ರಸ್ತಾಪಿಸಿದರು.
'ಜೈಲಿನಲ್ಲಿ ಯಾರಾದರೂ ಸದ್ವಿಚಾರಗಳನ್ನು ಕಲಿಯುತ್ತಾರೆಯೆ?' ಜಂಗಲ್ ರಾಜ್-1 ರ ಅವಧಿಯಲ್ಲಿ ಜೈಲು ವಾಸದ ಅನುಭವವಿರಲಿಲ್ಲ. ಜಂಗಲ್ ರಾಜ್-2 ರ ಅವಧಿಯಲ್ಲಿ ಜೈಲು ವಾಸದ ಅನುಭವವಿದೆ' ಎಂದು ಲಾಲೂ ಪ್ರಸಾದ್ ಉದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು.
ಕಳೆದ ತಿಂಗಳು ಮುಜ್ಹಾಫರ್ ಪುರದಲ್ಲಿ ನಡೆದ ಪ್ರಥಮ ಚುನಾವಣಾ ಪ್ರಚಾರ ಸಭೆಯಲ್ಲಿ ಆರ್.ಜೆ.ಡಿ ವಿರುದ್ಧ ನಡೆಸಿದ ವಾಗ್ದಾಳಿಯನ್ನು ಪುನರುಛ್ಚರಿಸಿದ ಮೋದಿ, "ಆರ್.ಜೆ.ಡಿ. ಅಂದರೆ 'ರೋಜಾನಾ ಜಂಗಲ್ ರಾಜ್ ಕಾ ಡರ್ (ಪ್ರತಿದಿನ ಜಂಗಲ್ ರಾಜ್ ನ ಭಯ)' ಎಂದರ್ಥ" ಎಂದು ಹೇಳಿದರು.
ಜೆಡಿ(ಯು) ಪಕ್ಷದ ವಿರುದ್ಧವೂ ತಮ್ಮ ಮಾತಿನ ಛಾಟಿ ಬೀಸಿದ ಮೋದಿ, ಜೆಡಿಯು ಅಂದರೆ 'ಜನತಾ-ಕಾ ದಮನ್ ಔರ್ ಉತ್ಪೀರಣ್ (ಜನತೆಯ ದಮನ ಮತ್ತು ನಿಗ್ರಹ)' ಎಂದು ಹೇಳಿದರು.
ನಂತರ, ಮೋದಿಯವರ ಮಾತಿಗೆ ಉರಿದೆದ್ದ ನಿತೀಶ್ ಕುಮಾರ್, 'ಜನರ ದಮನ ಮತ್ತು ನಿಗ್ರಹದ ಕುರಿತು ಮಾತನಾಡುವುದಾದರೆ ಅಂದಿನ ಪ್ರಧಾನಿ ವಾಜಪೇಯಿ ಅವರು ನಿಮಗೆ 2002ರಲ್ಲಿ ರಾಜಧರ್ಮ ಪಾಲಿಸುವುದಕ್ಕೆ ಕೊಟ್ಟ ಸಲಹೆ ಇಂದಿಗೂ ಜನರಿಗೆ ನೆನಪಿದೆ' ಎಂದು ಟ್ವೀಟಿಸಿದ್ದಾರೆ.
ಬಿಹಾರದಲ್ಲಿ ಆಡಳಿತಾರೂಢ ಪಕ್ಷದ ನಾಯಕರು ಕೇಂದ್ರ ಸರಕಾರ ಮಾಡಲಿಛ್ಚಿಸಿರುವ ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡಿ ಉದ್ದೇಶಪೂರ್ವಕವಾಗಿ ರಾಜ್ಯವನ್ನು ಹಿಂದುಳಿವುವಂತೆ ಮಾಡಿದ್ದಾರೆ ಎಂದು ನರೇಂದ್ರ ಮೋದಿಯವರು ಆರೋಪಿಸಿದ್ದಾರೆ.
'ಗಂಗಾ ಮಾತೆ ಹರಿಯುತ್ತಿದ್ದಾಳೆ. ಆದರೆ ಲೋಟಾವನ್ನು ಉಲ್ಟಾ ಹಿಡಿದುಕೊಂದರೆ ಅದರಲ್ಲಿ ನೀರು ತುಂಬುವುದಾದರೂ ಹೇಗೆ ? ಎಂಬ ಉದಾಹರಣೆಯೊಂದಿಗೆ ಮೋದಿ, 'ನಾವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹರಿಸುತ್ತಿದ್ದೇವೆ. ಆದರೆ ಇಲ್ಲಿ ಆಡಳಿತ ಮಾಡುತ್ತಿರುವವರು ಅದರ ಉಪಯೋಗ ಪಡೆಯುತ್ತಿಲ್ಲ' ಎಂದರು.
ಬಿಹಾರದಲ್ಲಿ ಪ್ರವಾಸಿ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದ ಮೋದಿ, ತಾವು ವಿದೇಶ ಪ್ರವಾಸದಲ್ಲಿರುವಾಗ ಹಲವರು ಬಿಹಾರದಲ್ಲಿ ಬೌದ್ಧ ಧರ್ಮಕ್ಕೆ ಸಾಂಬಂಧಿಸಿದಂತೆ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಮುಂದೆ ಬರುವುದಾಗಿ ಹೇಳಿದ್ದರು. ಆದರೆ ಈವರೆಗೂ ಬೋಧ್ ಗಯಾದಲ್ಲಿ ಯಾವುದೇ ಪ್ರಗತಿಯೂ ಆಗಲಿಲ್ಲ ಎಂದು ವಿಷಾದಿಸಿದರು. ಅಷ್ಟೇ ಅಲ್ಲ, ಬಿಹಾರದಲ್ಲಿ ಯುವಕರಿಗೆ ಸರಿಯಾದ ಶಿಕ್ಷಣ ನೀಡಿ ರಾಜ್ಯದ ಭವಿಷ್ಯ ರೂಪಿಸುವ ನಿಟ್ಟಿನತ್ತಲೂ ಯಾವುದೇ ಕಾರ್ಯಗಳು ನಡೆದಿಲ್ಲ ಎಂದರು.
'ಬಿಹಾರದಲ್ಲಿ 80 ಲಕ್ಷ ವಿದ್ಯಾರ್ಥಿಗಳಿಗೆ ಕೇವಲ 25,000 ಇಂಜಿನೀರಿಂಗ್ ಸ್ಥಾನಗಳಿವೆ. ಅದರೆ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಅದಕ್ಕಿಂತ ಉತ್ತಮ ಸೌಲಭ್ಯಗಳಿವೆ ಎಂದು ಮೋದಿ ಹೇಳಿದರು.
2014ರ ಸಾರ್ವತ್ರಿಕ ಚುನಾವಣೆಯ ನಂತರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೆ ಇದೇ ಅಕ್ಟೋಬರ್ ನಲ್ಲಿ ನಡೆಯುವ ಬಿಹಾರದ ವಿಧಾನಸಭಾ ಚುನಾವಣೆ ಅತ್ಯಂತ ಪ್ರತಿಷ್ಠೆಯ ವಿಷಯವಾಗಿದ್ದು, ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರ ಮೈತ್ರಿ ಒಕ್ಕೂಟವನ್ನು ಕಣದಲ್ಲಿ ಎದುರಿಸಬೇಕಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಸಹ ನಿತೀಶ್ ಕುಮಾರ್-ಲಾಲೂ ಮೈತ್ರಿ ಕೂಟವನ್ನಿ ಸೇರಿ ಬಿಜೆಪಿ ವಿರುದ್ಧ ಸೆಣಸಿದ್ದವು. ಆದರೆ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ತೀವ್ರ ಸೋಲಾಗಿತ್ತು.