ಬೆಂಗಳೂರು : ಶುಕ್ರವಾರ ವಿಧಾನಸಭೆಯಲ್ಲಿ ಬಜೆಟ್ ನ ಅಂಕಿ ಅಂಶದ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡುತ್ತಿರುವ ವೇಳೆ ಪ್ರತಿಪಕ್ಷ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ರೊಚ್ಚಿಗೆದ್ದ ಘಟನೆ ನಡೆಯಿತು.
ಕೇಂದ್ರದಿಂದ 4,690 ಕೋಟಿ ರೂಪಾಯಿ ಕೊರತೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡುತ್ತಿರುವಾಗ ಮಧ್ಯೆ ತೊಂದರೆ ಮಾಡಬೇಡಿ ಎಂದರು. ಆದರೆ ಮುಖ್ಯಮಂತ್ರಿ ಮಾತು ಕೇಳಲು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ಸದಸ್ಯರು ನಿರಾಕರಿಸಿ, ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ ಎಂದರು. ಇದರಿಂದ ಮುಖಮಂತ್ರಿ ಸಿದ್ದರಾಮಯ್ಯ ಆಕ್ರೋಶಿತರಾದರು.
ರೊಚ್ಚಿಗೆದ್ದ ಸಿಎಂ ಸಿದ್ದರಾಮಯ್ಯ, ಸತ್ಯ ಒಪ್ಪಿಕೊಳ್ಳಿ ಸತ್ಯ ಯಾವಾಗಲೂ ಕಠೋರವಾಗಿರುತ್ತದೆ ಎಂದರು. ಅದಕ್ಕೆ ಬಿಜೆಪಿ ಶಾಸಕ ಸಿ ಟಿ ರವಿ, ಕೊಟ್ಟಿರುವ ಅನುದಾನದ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದ್ದೀರಿ ಎಂದರು. ಆಗ ಸಿಟಿ ರವಿಯನ್ನು ಸದನದಿಂದ ಹೊರಹಾಕುವಂತೆ ಸಿದ್ದರಾಮಯ್ಯ ಸೂಚಿಸಿದರು. ಇದರಿಂದಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಮಧ್ಯ ಸದನದಲ್ಲಿ ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಅಂದ್ರೆ ಸುಳ್ಳು, ಸುಳ್ಳು ಅಂದ್ರೆ ಬಿಜೆಪಿ. ಬಿಜೆಪಿಯವರು ಸುಳ್ಳಿನ ಸರದಾರರು ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿ, ಬಜೆಟ್ ಅಂಕಿ ಅಂಶದ ಪುಸ್ತಕವನ್ನು ಎಸೆದರು. ಈ ಸಂದರ್ಭದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಗದ್ದಲ ನಡೆಸದಂತೆ ಸದಸ್ಯರಿಗೆ ಎಚ್ಚರಿಕೆ ನೀಡಿದರು. ಆದರೆ ಒಂದು ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಸ್ಪೀಕರ್ ಮಾತನ್ನು ಕೇಳದೆ ತೀವ್ರ ಕೋಲಾಹಲ ನಡೆಸಿದರು.
ಈ ಗದ್ದಲದ ನಡುವೆಯೇ ಲೋಕಾಯುಕ್ತ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಕಾನೂನು ಸಚಿವ ಜಯಚಂದ್ರ ಮಂಡಿಸಿದರು. ಈ ಸಂದರ್ಭದಲ್ಲಿ ಆರ್ಥಿಕ ವಿಧೇಯಕ ಕೂಡಾ ಅಂಗೀಕಾರವಾಯಿತು. ನಂತರ ಕಲಾಪವನ್ನು ಮಧ್ಯಾಹ್ನ 3ಗಂಟೆಗೆ ಮುಂದೂಡಲಾಯಿತು.