ನವದೆಹಲಿ : 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಯಾಕೂಬ್ ಮೆಮೋನ್ ಗಲ್ಲು ಶಿಕ್ಷೆ ರದ್ದು ಕೋರಿ ಸಲ್ಲಿಸಿದ್ದ ಮರುಪರಿಶೀಲನಾ (ಕ್ಯೂರೇಟಿವ್) ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಮಂಗಳವಾರ ಯಾಕೂಬ್ ಅರ್ಜಿಯನ್ನು ತಿರಸ್ಕರಿಸಿ ತೀರ್ಪು ನೀಡಿತು. ಇದರಿಂದ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರ ಮೆಮೋನ್ ಗೆ ಗಲ್ಲು ಶಿಕ್ಷೆ ಖಚಿತವಾಗಿದೆ.
ಜೀವದಾನ ಪಡೆಯಲು ಮರುಪರಿಶೀಲನಾ (ಕ್ಯೂರೇಟಿವ್) ಅರ್ಜಿ ಕಾನೂನಿನ ಪ್ರಕಾರ ಕೊನೆಯ ಅವಕಾಶವಾಗಿತ್ತು. 2006ರಿಂದ ಮೆಮೋನ್ ಅನ್ನು ನಾಗಪುರದ ಸೆಂಟ್ರಲ್ ಜೈಲಿನಲ್ಲಿ ಹೆಚ್ಚಿನ ಭದ್ರತೆಯೊಂದಿಗೆ ಇರಿಸಲಾಗಿದೆ.
ಇದಕ್ಕೂ ಮೊದಲು ಮೆಮೋನ್ ನ ಕ್ಷಮಾದಾನ ಅರ್ಜಿ ರಾಷ್ಟ್ರಪತಿಗಳಿಂದ ತಿರಸ್ಕರಿಸಲ್ಪಟ್ಟಿದೆ.
ಯಾಕೂಬ್ ಮೆನನ್ ಗಲ್ಲುಶಿಕ್ಷೆ ಜಾರಿಗೆ ಸಂಬಂಧಿಸಿದಂತೆ ಪೂರ್ವ ತಯಾರಿ ನಡೆಯುತ್ತಿರುವುದಾಗಿ ಮಹಾರಾಷ್ಟ್ರ ಗೃಹಸಚಿವಾಲಯದ ಮೂಲಗಳು ತಿಳಿಸಿವೆ. ಮೆಮೋನ್ ಕುಟುಂಬದವರಿಗೆ ಮರಣದಂಡನೆ ಕುರಿತಂತೆ ಜುಲೈ 14ರಂದೇ ಮಾಹಿತಿ ನೀಡಲಾಗಿದೆ ಎಂದು ವಿವರಿಸಿದೆ.
ಯಾಕೂಬ್ ಮೆಮೋನ್ ಅನ್ನು ಜುಲೈ 30 ರಂದು ಗಲ್ಲಿಗೇರಿಸುವ ಸಾಧ್ಯತೆ ಇದೆ.