ನವದೆಹಲಿ : ಥೈಲಾಂಡ್ನ ಬ್ಯಾಂಕಾಕ್ನಿಂದ ಟರ್ಕಿ ರಾಜಧಾನಿ ಇಸ್ತಾಂಬುಲ್ಗೆ ತೆರಳುತ್ತಿದ್ದ ಟರ್ಕಿಶ್ ಏರ್ವೇಸ್ ನ ಏರ್ ಬಸ್ 330 ವಿಮಾನದಲ್ಲಿ ಬಾಂಬ್ ಇದೆಯೆಂಬ ಬೆದರಿಕೆಯ ಕಾರಣ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯಾ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಭೂಸ್ಪರ್ಶ ಮಾಡಿದೆ.
ವಿಮಾನದಲ್ಲಿ ಬಾಂಬ್ ಇದೆ ಎಂಬ ಬರಹ ಲಿಪ್ಸ್ಟಿಕ್ ನಲ್ಲಿ ವಿಮಾನದ ಶುಚಾಲಯವೊಂದರ ಕನ್ನಡಿಯಲ್ಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪೈಲಟ್ ವಿಮಾನವನ್ನು ತುರ್ತು ಭೂಸ್ವರ್ಶ ಮಾಡುವುದಕ್ಕಾಗಿ ನಾಗಪುರದ ಎಟಿಸಿ ಅನುಮತಿ ಕೋರಿದ್ದಾರೆ. ನಾಗಪುರ ಎಟಿಸಿ ದೆಹಲಿ ಎಟಿಸಿ ಗೆ ವಿನಂತಿ ಮಾಡಲು ಸಲಹೆ ಮಾಡಿದೆ. ದೆಹಲಿ ಎಟಿಸಿ ಅನುಮತಿ ಪಡೆದು ವಿಮಾನವನ್ನು ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.
ದೆಹಲಿ ವಿಮಾನ ನಿಲ್ದಾಣದಲ್ಲಿ ಈ ವಿಮಾನವನ್ನು ಪ್ರತ್ಯೇಕ ಸ್ಥಳದಲ್ಲಿ ನಿಲುಗಡೆ ಮಾಡಲಾಗಿದ್ದು ತೀವ್ರ ತಪಾಸಣೆಗೆ ಒಳಪಡಿಸಲಾಗಿದೆ.
ವಿಮಾನವನ್ನು ಎನ್ಎಸ್ಜಿ ಕಮಾಂಡೊಗಳು, ಸಿಐಎಸ್ಎಫ್ ಪಡೆಗಳು ಸೇರಿದಂತೆ ಇತರ ಭದ್ರತಾ ಪಡೆಗಳು ಸುತ್ತುವರಿದಿದ್ದು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಬಾಂಬ್ ನಿಷ್ಕ್ರೀಯ ದಳವೂ ಸ್ಥಳಕ್ಕೆ ಆಗಮಿಸಿದೆ.
ವಿಮಾನದಲ್ಲಿದ್ದ ಸುಮಾರು 148 ಪ್ರಯಾಣಿಕರನ್ನು ತಪಾಸಣೆಗೆ ಒಳಪದಿಸಿದ ನಂತರ ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಅವರ ಬ್ಯಾಗ್ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಭಾರತೀಯ ಕಾಲಮಾನ ಅಪರಾಹ್ನ 1.45 ಕ್ಕೆ ವಿಮಾನವನ್ನು ಇಳಿಸಲಾಗಿದ್ದು ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ. ಇದುವರೆಗೆ ಯಾವುದೇ ಸ್ಪೋಟಕ ಪತ್ತೆಯಾದ ಬಗ್ಗೆ ವರದಿಯಾಗಿಲ್ಲ. ಇದೊಂದು ಹುಸಿ ಬೆದರಿಕೆ ಇರಬಹುದು ಎಂದು ಹೇಳಲಾಗಾಗುತ್ತಿದೆ.