ನವದೆಹಲಿ : 'ಎ.ಐ.ಸಿ.ಸಿ' ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರ ವಿಮಾನ ನಿಲ್ದಾಣದಲ್ಲಿ ತಪಾಸಣೆ ವಿನಾಯಿತಿ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.
ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ತಪಾಸಣೆ ವಿನಾಯಿತಿ ಪಡೆಯುತ್ತಿರುವವರ ಪಟ್ಟಿಯನ್ನು ಸಿದ್ಧಪಡಿಸುವಂತೆ ನಾಗರಿಕ ವಿಮಾನ ಯಾನ ಸಚಿವ ಅಶೋಕ್ ಗಜಪತಿ ರಾಜು, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ ಅನಗತ್ಯವಾಗಿ ವಿನಾಯಿತಿ ಪಡೆಯುತ್ತಿರುವವರ ಹೆಸರನ್ನೂ ಪಟ್ಟಿ ಮಾಡುವಂತೆ ಆದೇಶ ನೀಡಿದ್ದಾರೆ. ಯಾವುದೇ ಗಂಭೀರ ಕಾರಣವಿಲ್ಲದೇ ಅಲಂಕಾರಿಕವಾಗಿ ತಪಾಸಣೆಯಿಂದ ವಿನಾಯಿತಿ ಪಡೆಯುತ್ತಿರುವವರ ಹೆಸರನ್ನು ಕೈಬಿಡುವಂತೆಯೂ ಸಚಿವಾಲಯಕ್ಕೆ ಆದೇಶ ನೀಡಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ವಿನಾಯಿತಿಯಿಂದ ರಾಬರ್ಟ್ ವಾದ್ರ ವಂಚಿತರಾಗುವ ಸಾಧ್ಯತೆಗಳಿವೆ. ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿರದೇ ಇದ್ದರೂ ಸೋನಿಯಾ ಗಾಂಧಿ ಅಳಿಯ ಎಂಬ ಏಕೈಕ ಕಾರಣಕ್ಕೆ ವಿನಾಯಿತಿ ಪಡೆದಿರುವ ದೇಶದ ಏಕೈಕ ನಾಗರಿಕರೆಂದರೆ ಅದು ವಾದ್ರ. ಸಧ್ಯದಲ್ಲೇ ವಾದ್ರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ.
ವಾದ್ರ ಅವರ ಭೂ ಅವ್ಯವಹಾರಗಳ ಬಗ್ಗೆ ತನಿಖೆ ಹಾಗೂ ವಾದ್ರ ಅವರಿಗೆ ವಿಮಾನ ನಿಲ್ದಾಣದಲ್ಲಿ ತಪಾಸಣೆಯಿಂದ ವಿನಾಯಿತಿ ಕೊಟ್ಟಿರುವ ವಿಶೇಷ ಸೌಲಭ್ಯದ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಎಂದು ಬಿಜೆಪಿ ನಾಯಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.