ಲಂಡನ್ : ದಿನಕ್ಕೊಂದು ಹೊಸ ತಿರುವು ಪಡೆಯುತ್ತಿರುವ ಲಲಿತ್ ಗೇಟ್ ಹಗರಣಕ್ಕೆ ಈಗ ಹೊಸ ಸೇರ್ಪಡೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರ ತಾನು ಐಪಿಎಲ್ ಕಮಿಷನರ್ ಆಗಿದ್ದಾಗ ತನ್ನ ಆತಿಥ್ಯ ಸ್ವೀಕರಿಸಿದ್ದರು ಎಂದು ಟ್ವಿಟ್ಟರ್ ನಲ್ಲಿ ಲಲಿತ್ ಮೋದಿ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ತನ್ನೊಡನೆ ನಂಟು ಇರುವ ವ್ಯಕ್ತಿಗಳ ಬಗ್ಗೆ ಮಾಹಿತಿಗಳನ್ನು ಖುಲಾಸೆ ಮಾಡುತ್ತಿರುವ ಲಲಿತ್ ಮೋದಿ ಈ ಟ್ವೀಟ್ ನಿಂದ ರಾಜಕೀಯ ವಲಯದಲ್ಲಿ, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದ್ದಾರೆ.
ರಾಹುಲ್ ಗಾಂಧಿ ರಾಬರ್ಟ್ ವಾದ್ರ ಜೊತೆ ತನ್ನ ಸಂಬಂಧದ ಬಗ್ಗೆ ಇನ್ನಷ್ಟು ಟ್ವೀಟಿಸುತ್ತ ಲಲಿತ್ ಮೋದಿ, ತನ್ನ ಆತಿಥ್ಯ ಸ್ವೀಕರಿಸಿದ ಬಗ್ಗೆ ರಾಹುಲ್ ಮತ್ತು ವಾದ್ರ ಸ್ಪಷ್ಟೀಕರಣ ನೀಡಲಿ ಎಂದು ಸವಾಲೆಸೆದಿದ್ದಾರೆ.
ಇನ್ನೊಂದು ಟ್ವೀಟಿನಲ್ಲಿ ಲಲಿತ್ ಈ ಬಗ್ಗೆ ಪ್ರಸ್ತಾಪಿಸಿ, ಇದರ (ತನ್ನ ಆತಿಥ್ಯ ಸ್ವೀಕರಿಸಿದ) ಬಗ್ಗೆ ರಾಹುಲ್ ಮತ್ತು ರಾಬರ್ಟ್ ವಾದ್ರ ಕಾಂಗ್ರೆಸ್ ನಾಯಕತ್ವಕ್ಕೆ ಮಾಹಿತಿ ನೀಡಿದ್ದಾರೆಯೆ? ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರ ಜೊತೆಗಿರುವ ತಮ್ಮ ಭಾವಚಿತ್ರವನ್ನೂ ಲಲಿತ್ ಮೋದಿ ಟ್ವಿಟ್ಟರ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಚಿತ್ರದಲ್ಲಿ ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರ ಇತರ ಗಣ್ಯರೊಡನೆ ಐಪಿಎಲ್ ಪಂದ್ಯವೊಂದರಲ್ಲಿ ಕುಳಿತಿರುವ ದೃಶ್ಯವಿದೆ. ಲಲಿತ್ ಮೋದಿ ಮತ್ತು ರಾಹುಲ್ ಗಾಂಧಿ ತಮ್ಮ ಮೊಬೈಲ್ ಗಳಲ್ಲಿ ಮಾತನಾಡುತ್ತಿರುವುದು ಕಾಣಿಸುತ್ತದೆ.
ಕೆಲವು ದಿನಗಳ ಹಿಂದೆಯಷ್ಟೇ ಲಲಿತ್ ಮೋದಿ, ವರುಣ್ ಗಾಂಧಿ ಲಂಡನ್ ನಲ್ಲಿ ತನ್ನನ್ನು ಭೇಟಿಯಾಗಿ ಸೋನಿಯಾ ಗಾಂಧಿ ಜೊತೆಗೆ ಮಾತನಾಡಿ 'ಎಲ್ಲವನ್ನೂ' ಸರಿಪಡಿಸುವುದಾಗಿ ಹೇಳಿದ್ದರು ಎಂದು ಟ್ವೀಟ್ ಮಾಡಿದ್ದರು.
ಆಷ್ಟೇ ಅಲ್ಲ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರ ಮತ್ತು ಅಳಿಯ ರಾಬರ್ಟ್ ವಾದ್ರ ಈ ಹಿಂದೆ ಲಂಡನ್ ನ ರೆಸ್ಟೋರಂಟ್ ಒಂದರಲ್ಲಿ ತನ್ನನ್ನು ಭೇಟಿಯಾಗಿದ್ದರು ಎಂದು ಸಹ ಟ್ವೀಟ್ ಮಾಡಿದ್ದರು.
ಒಟ್ಟಿನಲ್ಲಿ ಲಲಿತ್ ಮೋದಿ ಹಗರಣವನ್ನು ಬಿಜೆಪಿ ಸರಕಾರದ, ಮುಖ್ಯವಾಗಿ ಪ್ರಧಾನಿ ಮೋದಿ ವಿರುದ್ಧ ಅಸ್ತ್ರವಾಗಿ ಬಳಸಲು ಹೆಣಗುತ್ತಿರುವ ಕಾಂಗ್ರೆಸ್ ಈಗ ತನ್ನ ನಾಯಕರನ್ನೇ ಸಮರ್ಥಿಕೊೞಬೇಕಾದ ಹಂತಕ್ಕೆ ಬಂದಿದೆ.