ಬೆಂಗಳೂರು : ವಿವಿಧ ಕ್ಷೇತ್ರಗಳ ಪ್ರತಿಭಾವಂತರಿಗೆ ಸರ್ಕಾರಿ ಶಾಲೆಗಳಲ್ಲಿ ಪ್ರತಿ ಶನಿವಾರ ಪಾಠ ಮಾಡುವ ಅವಕಾಶ ಕಲ್ಪಿಸಲು ಮುಂದಾಗಿರುವ ಶಿಕ್ಷಣ ಇಲಾಖೆ, ಶಾಲೆಗೆ ಬನ್ನಿ ಶನಿವಾರ, ಕಲಿಯಲು ನೀಡಿ ಸಹಕಾರ ಎಂಬ ವಿನೂತನ ಯೋಜನೆ ಜಾರಿಗೆ ತಂದಿದೆ.
ಈ ಯೋಜನೆಯಡಿಯಲ್ಲಿ, ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳಲ್ಲಿ ಮತ್ತು ವಿವಿಧ ಇಲಾಖೆಗಲಲ್ಲಿ ಕೆಲಸ ಮಾಡುತ್ತಿರುವ ಪ್ರತಿಭಾವಂತರು, ಪ್ರತಿ ಶನಿವಾರ ಇಚ್ಛೆಪಟ್ಟರೆ ಯಾವುದೇ ಸರ್ಕಾರಿ ಶಾಲೆಗೆ ತೆರಳಿ ಅಲ್ಲಿನ ಮಕ್ಕಳಿಗೆ ಆಂಗ್ಲ ಭಾಷೆ, ವಿಜ್ಞಾನ, ಗಣಿತ, ಸಾಮಾನ್ಯ ಜ್ಞಾನ, ಕ್ರೀಡಾ ವಿಷಯಗಳು ಸೇರಿದಂತೆ ಮಕ್ಕಳ ಜ್ಞಾನ ವಿಸ್ತಾರಕ್ಕೆ ಪೂರಕ ವಿಷಯಗಳನ್ನು ಬೋಧಿಸಿ, ಕಲಿಕೆಗೆ ಮಾರ್ಗದರ್ಶನ ನೀಡಬಹುದು.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿಸಿ)ಯ ಮೂಲಕ ಈ ಯೋಜನೆಯನ್ನು ಜೂನ್ 18 ರಿಂದ ಜಾರಿಗೊಳಿಸಲಾಗಿದೆ. ಪ್ರತಿ ಶನಿವಾರ ಬೆಳಗ್ಗೆ 7.30ರಿಂದ 12 ಗಂಟೆವರೆಗೆ ಶಾಲಾವಧಿ ಇರುತ್ತದೆ. ಸರ್ಕಾರಿ ನೌಕರರಿಗೆ 2ನೇ ಶನಿವಾರ, ಸಾಫ್ಟ್ ವೇರ್ ಉದ್ಯೋಗಿಗಳಿಗೆ ಪ್ರತಿ ಶನಿವಾರವೂ ರಜೆ ಇರುವುದರಿಂದ ಆ ದಿನ ಶಾಲೆಗೆ ಬಂದು ಬೋಧನೆ ಮಾಡಬಹುದು ಎಂದು ಡಿಎಸ್ಇಆರ್ಟಿಸಿ ತಿಳಿಸಿದೆ. ಈ ಯೋಜನೆಯಲ್ಲಿ ಈ ಕೆಳಗಿನ ನಿಬಂಧನೆಗಳನ್ನು ಡಿಎಸ್ಇಆರ್ಟಿಸಿ ವಿಧಿಸಿದೆ.
1.ಉದ್ಯೋಗ ಮಾಡುತ್ತಿರುವ ವ್ಯಕ್ತಿ ತಾನು ಜನಿಸಿದ ಊರು, ವ್ಯಾಸಂಗ ಮಾಡಿದ ಶಾಲೆ ಅಥವಾ ಆತ ಬಯಸುವ ಯಾವುದೇ ನಗರ/ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ಮಾಡಿಕೊಂಡ ಶಾಲೆಯ ಮುಖ್ಯ ಶಿಕ್ಷಕರಿಗೆ ಪೂರ್ವಭಾವಿಯಾಗಿ ಅವರು ಕೆಲಸ ನಿರ್ವಹಿಸುತ್ತಿರುವ ಅಧಿಕೃತ ಸಂಸ್ಥೆಯ ವಿಳಾಸದ ಗುರುತು ಪತ್ರದೊಂದಿಗೆ ಮನವಿ ಸಲ್ಲಿಸಿ, ಅನುಮತಿ ಪಡೆಯಬೇಕು. ಮನವಿಯಲ್ಲಿ ವಿದ್ಯಾರ್ಹತೆ, ಮಕ್ಕಳಲ್ಲಿ ಹಂಚಿಕೊಳ್ಳಲು ಬಯಸುವ ವಿಷಯ, ಶಾಲೆಗೆ ಬರುವ ಶನಿವಾರಗಳ ವಿವರ ಹಾಗೂ ಶಾಲೆಯಲ್ಲಿ ಇರಲು ಬಯಸುವ ಅವಧಿಯ ವಿವರ, ಇ–ಮೇಲ್, ಮೊಬೈಲ್ ಸಂಖ್ಯೆಗಳನ್ನು ನೀಡಬೇಕು. www.dsert.kar.nic.in ವೆಬ್ ಸೈಟ್ ನಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
2.ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ರಚಿಸಿರುವ ಯಾವುದೇ ನಿಯಮಗಳಿಗೆ ಚ್ಯುತಿ ಬಾರದಂತೆ ಶಾಲೆಯಲ್ಲಿ ನಡೆದುಕೊಳ್ಳಬೇಕು.
3.ಶಾಲೆಗೆ ಬರಲು ಒಪ್ಪಿಕೊಂಡ ಶನಿವಾರ ಶಾಲೆಗೆ ಬರಲು ಆಗದಿದ್ದರೆ ಮುಖ್ಯ ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಶಾಲೆಗೆ ಭೇಟಿ ನೀಡಿದ ವೇಳೆ ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿ ಪಠ್ಯ ವಿಷಯ ಅಥವಾ ಪಠ್ಯದಲ್ಲಿನ ಬೋಧನಾ ಅಂಶಗಳಿಗೆ ಅನುಕೂಲವಾಗುವ ಪೂರಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
4.ಬೋಧನಾ ವೇಳೆ ಆ ತರಗತಿಯಲ್ಲಿ ಒಬ್ಬ ಶಿಕ್ಷಕರು ಇರಬೇಕು.