ನವದೆಹಲಿ : ದೆಹಲಿ ಕ್ರಿಕೆಟ್ ಸಂಸ್ಥೆಯ ಹಗರಣದಲ್ಲಿ ಅರುಣ್ ಜೇಟ್ಲಿ ಭಾಗಿಯಾಗಿದ್ದು, ಅವರು ತಮ್ಮ ದೂರವಾಣಿ ಕರೆ ವಿವರ ಬಹಿರಂಗಪಡಿಸಲಿ ಎಂದು ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಿವಾದದಲ್ಲಿ ಸಿಲುಕಿಕೊಂಡಿರುವಾಗಲೇ, ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಹಗರಣವೊಂದರಲ್ಲಿ ಭಾಗಿಯಾದ ಗಂಭೀರ ಆರೋಪ ಕೇಳಿಬಂದಿದೆ.
ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಹಗರಣದಲ್ಲಿ ಜೇಟ್ಲಿ ಅವರೂ ಭಾಗಿಯಾಗಿದ್ದಾರೆ. ಈ ಸಂಬಂಧ ಜೇಟ್ಲಿ ಅವರು ತಮ್ಮ ದೂರವಾಣಿ ಕರೆ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಲಲಿತ್ ಮೋದಿ ಅವರು ಸರಣಿ ಟ್ವೀಟ್ ಗಳನ್ನು ಮಾಡಿ ಸವಾಲು ಹಾಕಿದ್ದಾರೆ.
ಅರುಣ್ ಜೇಟ್ಲಿ ದಶಕಗಳಿಂದ ಬಿಸಿಸಿಐ ಅನ್ನು ನಿಯಂತ್ರಿಸಿಕೊಂಡು ಬರುತ್ತಿದ್ದಾರೆ. ಅವರ ಅನುಮತಿ ಇಲ್ಲದೆ ಬಿಸಿಸಿಐ ಅಥವಾ ಐಪಿಎಲ್ ನಲ್ಲಿ ಏನೂ ನಡೆಯುವುದಿಲ್ಲ. ಮಾಧ್ಯಮಗಳು ಹಾಗೂ ನ್ಯಾಯಾಲಯಗಳು ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರನ್ನು ದೋಷಿ ಎಂದು ಪರಿಗಣಿಸಿದ ಬಳಿಕವೂ ’ಹಳೆಯ ಸ್ನೇಹಿತ'ನನ್ನು ಜೇಟ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ದೂಷಿಸಿದ್ದಾರೆ. ಅಲ್ಲದೆ ಜೇಟ್ಲಿ ಅವರೊಬ್ಬ ಕಾಂಗ್ರೆಸ್ಸಿಗ ಎಂದು ಕುಟುಕಿದ್ದಾರೆ.
ಐಪಿಎಲ್ 2ನೇ ಆವೃತ್ತಿಯಲ್ಲಿ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆಯಾಗಿದ್ದರ ಹೊಣೆಯನ್ನು ಅರುಣ್ ಜೇಟ್ಲಿ, ಬಿಸಿಸಿಐನ ಪ್ರಮುಖ ಸದಸ್ಯರಾದ ಎನ್ಸಿಪಿ ನಾಯಕ ಶರದ್ ಪವಾರ್, ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಹಾಗೂ ಶ್ರೀನಿವಾಸನ್ ಅವರೂ ಹೊತ್ತುಕೊಳ್ಳಬೇಕು ಎಂದು ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಆಗ್ರಹಿಸಿರುವ ಸಂದರ್ಶನವನ್ನು ಉಲ್ಲೇಖೀಸಿದ್ದಾರೆ.