ಭೋಪಾಲ್ : ಉತ್ತರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದ ಪತ್ರಕರ್ತ ಜೋಗಿಂದರ್ ಸಿಂಗ್ ರನ್ನು ಸಜೀವವಾಗಿ ಸುಟ್ಟ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಪತ್ರಕರ್ತನ ಸಜೀವ ದಹನವು ಮಧ್ಯಪ್ರದೇಶದಲ್ಲಿ ವರದಿಯಾಗಿದೆ.
ಬಲಾಘಾಟ್ ಜಿಲ್ಲೆಯ ಕಟಾಂಗಿ ನಿವಾಸಿಯಾದ 44 ವರ್ಷದ ಸಂದೀಪ್ ಕೊತಾರಿ ಹತ್ಯೆಯಾದ ಪತ್ರಕರ್ತ. ಜೂನ್ 14ರಿಂದ ಸಂದೀಪ್ ನಾಪತ್ತೆಯಾಗಿದ್ದರು. ಈ ಕುರಿತಾಗಿ ಅವರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಪೊಲೀಸರು ಶಂಕಿತ ಮೂವರು ಯುವಕರನ್ನು ವಶಕ್ಕೆ ಪಡೆದಿದ್ದರು. ಸಂದೀಪ್ರನ್ನು ಹತ್ಯೆಗೈದಿದ್ದಾಗಿ ಈ ಯುವಕರು ಒಪ್ಪಿಕೊಂಡಿದ್ದಾರೆ.
ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿರುವ ಕಾಡೊಂದರಲ್ಲಿ ಸಂದೀಪ್ಗೆ ಬೆಂಕಿ ಇಟ್ಟು ಸಾಯಿಸಿ, ನಂತರ ಅಲ್ಲಿಯೇ ಶವವನ್ನು ಊಳಿದ್ದಾಗಿ ಯುವಕರು ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.