ನವದೆಹಲಿ : ನಾಗಾ ಉಗ್ರರ ವಿರುದ್ಧ ಮ್ಯಾನ್ಮಾರ್ ನಲ್ಲಿ ಭಾರತದ ಸೇನೆಯ ಕಾರ್ಯಾಚರಣೆ ಮನೋಸ್ಥಿತಿ ಬದಲಾದ ಧ್ಯೋತಕ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಸೇನೆ ಕಾರ್ಯಾಚರಣೆ ವಿರುದ್ಧ ಪಾಕಿಸ್ತಾನದ ಹೇಳಿಕೆಗೆ ತಿರುಗೇಟು ನೀಡಿರುವ ಪರಿಕ್ಕರ್, 'ಭಾರತಕ್ಕೆ ಹೆದರುವವರು ಹೊಸ ಬಗೆಯಿಂದ ಪ್ರತಿಕ್ರಿಯಿಸುತ್ತಿದ್ದಾರೆ' ಎಂದು ಪಾಕಿಸ್ತಾನದ ಹೆಸರು ಹೇಳದೆ ಕುಟುಕಿದ್ದಾರೆ.
ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧವೂ ಅಂಥದ್ದೇ ಕಾರ್ಯಾಚರಣೆ ನಡೆಸಿ, ಅಲ್ಲಿ ನಡೆಸುತ್ತಿರುವ ಉಗ್ರ ಸಂಘಟನೆಗಳ ಶಿಬಿರಗಳ ಮೇಲೆ ಮ್ಯಾನ್ಮಾರ್ ಮಾದರಿ ದಾಳಿ ನಡೆಸಲು ಸಲಹೆಗಳು ಕೇಳಿ ಬರುತ್ತಿದೆ. ಆದರೆ ಇಂಥ ದಾಳಿ ನಡೆದರೆ ನಾವು ಮ್ಯಾನ್ಮಾರ್ ಅಲ್ಲ ಎಂದು ಪಾಕ್ ತಿರುಗೇಟು ನೀಡಿತ್ತು.
ಮ್ಯಾನ್ಮಾರ್ ನಲ್ಲಿ ಬೀಡು ಬಿಟ್ಟಿದ್ದ ಈಶಾನ್ಯರಾಜ್ಯಗಳ ಬಂಡುಕೋರರನ್ನು ಭಾರತೀಯ ಸೇನೆ ಯಶಸ್ವಿಯಾಗಿ ಬಗ್ಗು ಬಡಿದಿದೆ. ಈ ಮೂಲಕ, ನೆರೆದೇಶಗಳಲ್ಲಿನ ಉಗ್ರರಿಗೆ ಎಚ್ಚರಿಕೆ ರವಾನಿಸಿರುವುದನ್ನು ಪರಿಗಣಿಸಿರುವ ಪಾಕ್ ವಿದೇಶಾಂಗ ಸಚಿವರು, ’'ಪಾಕಿಸ್ತಾನವು ಮ್ಯಾನ್ಮಾರ್ ಅಲ್ಲ,’ ಎಂದಿದ್ದರು. '’ನಮ್ಮ ಸೇನೆ ಸರ್ವಸನ್ನದ್ಧವಾಗಿದೆ’ ಎಂದು ಪಾಕ್ ಗೃಹ ಸಚಿವ ಚೌಧರಿ ನಿಸಾರ್ ಅಲಿಖಾನ್ ಗುಡುಗಿದ್ದರು.