ನವದೆಹಲಿ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಈ ಭೇಟಿ ಬಗ್ಗೆ ದೇವೇಗೌಡರು ಸಂತಸ ವ್ಯಕ್ತಪಡಿಸಿದ್ದು, ಮಾತುಕತೆ ಸಮಾಧಾನ ಮತ್ತು ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ.
ತಮ್ಮ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಂದಿನ ಆಡಳಿತ ನಡೆಸಲು ಸಲಹೆಗಳನ್ನು ಪಡೆಯುವ ಸಂಬಂಧ ಮೋದಿ ಅವರು ಗೌಡರನ್ನು ಚಾಯ್ ಪೇ ಚರ್ಚಾಗೆ ಆಹ್ವಾನಿಸಿದ್ದರು. ಜೂ.3ರಂದು ಸಂಜೆ ಸುಮಾರು ಮುಕ್ಕಾಲು ಗಂಟೆ ಕಾಲ ನಡೆದ ಮಾತುಕತೆಯಲ್ಲಿ ಕೃಷಿ ಕ್ಷೇತ್ರ, ಭೂಸ್ವಾಧೀನ ತಿದ್ದುಪಡಿ ವಿಧೇಯಕ, ಕುಡಿಯುವ ನೀರಿನ ಸಮಸ್ಯೆ ಮತ್ತಿತರ ವಿಷಯಗಳನ್ನು ಗೌಡರು ಪ್ರಧಾನಿಯ ಮುಂದೆ ಇಟ್ಟಿದ್ದಾರೆ.
ಮೋದಿ ಜತೆಗಿನ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಮನವಿ ಅಥವಾ ಪ್ರಸ್ತಾವನೆ ಸಲ್ಲಿಸಿಲ್ಲ. ರಾಜ್ಯದ ಬಗ್ಗೆಯೂ ಯಾವುದೇ ಚರ್ಚೆ ನಡೆಸಿಲ್ಲ. ಕೃಷಿ ಬೆಳವಣಿಗೆ ಕುಂಠಿತ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ ಎಂದು ತಿಳಿಸಿದರು.
ದೇಶದಲ್ಲಿ ಹಂತ ಹಂತವಾಗಿ ಕೃಷಿ ಬೆಳವಣಿಗೆ ಕುಂಠಿತವಾಗುತ್ತಿದೆ. ಹೀಗಾದರೆ ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ಇದನ್ನು ತಡೆದು ಬೆಳವಣಿಗೆ ಹೆಚ್ಚಿಸುವ ಬಗ್ಗೆ ಒತ್ತು ನೀಡುವಂತೆ ಸಲಹೆ ನೀಡಿದ್ದೇನೆ. ಜತೆಗೆ ಭೂಸ್ವಾಧೀನ ತಿದ್ದುಪಡಿ ವಿಧೇಯಕದಿಂದ ರೈತರಿಗೆ ಅನ್ಯಾಯವಾಗಬಾರದು. ತಮ್ಮ ಭೂಮಿ ಬಿಟ್ಟುಕೊಡುವ ರೈತರಿಗೆ ಸೂಕ್ತ ಪರಿಹಾರ ಮತ್ತು ಅವರ ಕುಟುಂಬದ ಸದಸ್ಯರಿಗೆ ಉದ್ಯೋಗ ಒದಗಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದೇನೆ. ಭೂಸ್ವಾಧೀನ ತಿದ್ದುಪಡಿ ವಿಧೇಯಕವನ್ನು ರೈತಪರ ಮಾಡುತ್ತೇವೆ ಎಂಬ ಭರವಸೆಯನ್ನು ಮೋದಿ ನೀಡಿದ್ದಾರೆ ಎಂದು ವಿವರಿಸಿದರು.
ಇದೇ ವೇಳೆ ದೇವೇಗೌಡರು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಕಾರ್ಯವೈಖರಿಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.