ನವದೆಹಲಿ : ಭಾರತ-ಪಾಕಿಸ್ತಾನ ಉಭಯ ರಾಷ್ಟ್ರಗಳೊಡನೆ ಮಾತುಕತೆ ಶುರುವಾಗಬೇಕೆಂದರೆ ನಮ್ಮ ಮೂರು ಷರತ್ತುಗಳಿಗೆ ಒಪ್ಪಬೇಕು ಎಂದು ಭಾರತ, ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದೆ.
ಪಾಕಿಸ್ತಾನದ ಜತೆಗಿನ ಸಂಬಂಧದ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ಗೊಂದಲವಿಲ್ಲ. ನಮ್ಮಲ್ಲಿ ಪಾಕ್ ಗೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿಯಿದೆ ಎಂದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, `ನಾವು ಪಾಕಿಸ್ತಾನದೊಂದಿಗೆ ಪ್ರತಿಯೊಂದು ವಿವಾದವನ್ನೂ ಶಾಂತಿಯುತವಾಗಿ ಬಗೆಹರಿಸಲು ಬಯಸುತ್ತೇವೆ. ಆದರೆ, ನಮ್ಮ ಮೂರು ಷರತ್ತುಗಳಿಗೆ ಪಾಕ್ ಒಪ್ಪಬೇಕು' ಎಂದು ಹೇಳಿದ್ದಾರೆ.
`ಮೊದಲನೆಯದಾಗಿ, ಮಾತುಕತೆಯು ಭಾರತ ಮತ್ತು ಪಾಕ್ ನಡುವೆ ಮಾತ್ರವೇ ನಡೆಯಬೇಕು. ಮೂರನೇ ರಾಷ್ಟ್ರದ ಹಸ್ತಕ್ಷೇಪ ನಡೆಯಬಾರದು. ಎರಡನೆಯದಾಗಿ, ಭಯೋತ್ಪಾದನೆ ಮತ್ತು ಹಿಂಸೆ ಮುಕ್ತ ವಾತಾವರಣವಿರಬೇಕು. ಮೂರನೆಯದಾಗಿ, ಮುಂಬೈ ದಾಳಿ ಸಂಚುಕೋರ ಝಕೀ ಉರ್ ರೆಹಮಾನ್ ಲಖ್ವಿ ಸೇರಿದಂತೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇವು ಇಂದಿನ ನಿರ್ಧಾರವಲ್ಲ, ಶಿಮ್ಲಾ ಮತ್ತು ಲಾಹೋರ್ ನಿರ್ಣಯದ ವೇಳೆಯೇ ಎರಡೂ ರಾಷ್ಟ್ರಗಳ ನಡುವೆ ಈ ಒಪ್ಪಂದ ನಡೆದಿತ್ತು' ಎಂದು ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.