ಕೊಚ್ಚಿ : ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂಬ ಹೇಳಿಕೆಯನ್ನು ಹೋಗಲಾಡಿಸಲು ಪ್ರಧಾನಿ ನರೇಂದ್ರಮೋದಿ ಮುಂದಾಗಿದ್ದಾರೆ. ಜುಲೈ ಅಥವಾ ಆಗಸ್ಟ್ ನಲ್ಲಿ ಕೇರಳಕ್ಕೆ ಆಗಮಿಸಲಿರುವ ಅವರು, ಶತಮಾನಗಳಷ್ಟು ಹಳೆಯದಾದ ವಿಶ್ವ ಪ್ರಸಿದ್ಧ ಚಾರ್ಮನ್ ಜುಮ್ಮಾ ಮಸೀದಿಗೆ ಭೇಟಿ ನೀಡಲಿದ್ದಾರೆ.
ಕೇರಳ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮುಖ್ಯ ಅತಿಥಿಯಾಗಿದ್ದಾರೆ. ಈಗಾಗಲೇ ಕಾರ್ಯಕ್ರಮಕ್ಕೆ ಆಗಮಿಸಲು ಅವರು ಸಮ್ಮತಿಸಿದ್ದು, ದಿನಾಂಕ ಮಾತ್ರ ನಿಗದಿಯಾಗಬೇಕಿದೆ. ಈ ಕಾರ್ಯಕ್ರಮ ಉದ್ಘಾಟನೆ ನಂತರ ಕೊಚ್ಚಿಯಲ್ಲಿರುವ ಚಾರ್ಮನ್ ಜುಮ್ಮಾ ಮಸೀದಿಗೆ ಭೇಟಿ ನೀಡಲು ಒಪ್ಪಿಕೊಂಡಿದ್ದಾರೆಂದು ಕೇರಳ ಪ್ರವಾಸೋದ್ಯಮ ಕಾರ್ಯದರ್ಶಿ ಜಿ.ಕಮಲವರ್ಧನ ರಾವ್ ತಿಳಿಸಿದ್ದಾರೆ.
ಕ್ರಿ.ಪೂ.629ರಲ್ಲಿ ಮಲ್ಲಿಕ್ ಬಿನ್ ದಿನರ್ ಅವರು ನಿರ್ಮಿಸಿದ್ದ ಈ ಮಸೀದಿಗೆ ಶತಮಾನಗಳ ಇತಿಹಾಸವಿದೆ. ಕೊಡಂಗಲೂರ್ ಆಡಳಿತಾವಧಿಯಲ್ಲಿ ಪೆರುಮಾಳ್ ಎಂಬ ರಾಜನ ಆಡಳಿತಾವಧಿಯಲ್ಲಿ ಇದು ಪೂರ್ಣಗೊಂಡಿತ್ತು. ಕೇವಲ ಮುಸ್ಲಿಂ ಜನಾಂಗಕ್ಕೆ ಮಾತ್ರ ಈ ಮಸೀದಿ ಸೀಮಿತವಾಗದೆ ಸರ್ವಧರ್ಮಗಳ ಮಂದಿರ ಎಂದೂ ಕರೆಯಲಾಗುತ್ತದೆ. ಪ್ರತಿ ವರ್ಷ ಮುಸ್ಲಿಮೇತರ ಜನರು ಕೂಡ ಇಲ್ಲಿಗೆ ಭೇಟಿ ನೀಡುತ್ತಾರೆ.
ವಿದ್ಯಾಧರ್ಮಾಂಬಂ ಎಂಬ ಕಾರ್ಯಕ್ರಮ ಪ್ರತಿ ವರ್ಷ ಇಲ್ಲಿ ನಡೆಯುತ್ತಿದ್ದು, ದೇಶ-ವಿದೇಶಗಳಿಂದ ಹಿಂದು, ಮುಸ್ಲಿಂ, ಕ್ರೈಸ್ತರು ಆಗಮಿಸುತ್ತಾರೆ. ಇದೀಗ ಇಂತಹ ಪವಿತ್ರ ಸ್ಥಳಕ್ಕೆ ಮೋದಿ ಭೇಟಿ ನೀಡಲು ಸಮ್ಮತಿ ನೀಡಿದ್ದಾರೆ.