ನವದೆಹಲಿ : ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಕೇಂದ್ರ ಬಿಂದುವಾಗಿ ಉದಯಿಸಿದೆ. ಮುಂದಿನ ಬೆಳವಣಿಗೆಗಳೇನಿದ್ದರೂ ಬಿಜೆಪಿ ಪರ ಮತ್ತು ಬಿಜೆಪಿ ವಿರೋಧಿ ಎಂಬ ನೆಲೆಯಲ್ಲಿರುತ್ತದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಎನ್ಡಿಎ ಸರ್ಕಾರದ ಒಂದು ವರ್ಷದ ಸಾಧನೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಜೇಟ್ಲಿ, ಲೋಕಸಭಾ ಚುನಾವಣೆ ನಂತರ ನಾವು ಐದು ರಾಜ್ಯಗಳಲ್ಲಿ ಸ್ವಂತ ಬಲದಿಂದ ಇಲ್ಲವೇ ನಮ್ಮ ಮಿತ್ರಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಿದ್ದೇವೆ. ರಾಷ್ಟ್ರ ರಾಜಕಾರಣದಲ್ಲಿ ನಾವೇ ಈಗ ಕೇಂದ್ರಬಿಂದು ಎಂದರು.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರ್ಣಾಯಕ ಗೆಲವು ಸಾಧಿಸಲಿದೆ. ಬಿಹಾರದಲ್ಲಿ ಆಗಿರುವ ರಾಜಕೀಯ ಹೊಂದಾಣಿಕೆ ಅಪ್ರಸ್ತುತವಾದದ್ದು. ಅಂಥ ಅವಕಾಶವಾದಿ ಹೊಂದಾಣಿಕೆಯನ್ನು ಜನ ಬೆಂಬಲಿಸಲ್ಲ ಎಂದು ತಿಳಿಸಿದರು.
ನಾವು ಭ್ರಷ್ಟಾಚಾರದ ಜಾಗದಲ್ಲಿ ಪಾರದರ್ಶಕ ಆಡಳಿತ ತಂದಿದ್ದೇವೆ. ಚಮಚಾಗಿರಿ ಬಂಡವಾಳಶಾಹಿಯನ್ನು ಮುಕ್ತ ನೀತಿಗಳಿಂದ ತೊಡೆದುಹಾಕಿದ್ದೇವೆ. ಈ ಒಂದು ವರ್ಷದಲ್ಲಿ ಪ್ರಧಾನಿ ಹುದ್ದೆಗೆ ಇದ್ದ ಗೌರವ ಮತ್ತು ಶ್ರೇಷ್ಠತೆ ಮರಳಿದೆ. ಈಗ ಪ್ರಧಾನಿಯದೇ ಅಂತಿಮ ನಿರ್ಧಾರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದೇ ಮುಖ್ಯ. ಈ ಹಿಂದೆ ಪ್ರಧಾನಿ ಹುದ್ದೆಗಿದ್ದ ಗೌರವ ಮತ್ತು ಶ್ರೇಷ್ಠತೆಗೆ ಧಕ್ಕೆ ಬಂದಿತ್ತು. ಪ್ರಧಾನಿಗೆ ಪರ್ಯಾಯವಾದ ಶಕ್ತಿಕೇಂದ್ರ ಇತ್ತು. ಅದರಿಂದಾಗಿ ಆಡಳಿತ ಮತ್ತು ನೀತಿ ನಿಯಮಗಳ ಜಾರಿಗೆ ಪಾರ್ಶ್ವವಾಯು ಬಡಿದಿತ್ತು ಎಂದರು.
ಎಐಡಿಎಂಕೆ ಆಗಲೀ, ತೃಣಮೂಲ ಕಾಂಗ್ರೆಸ್ ಆಗಲೀ ಬಿಜೆಪಿಗೆ ಮಿತ್ರ ಪಕ್ಷಗಳಲ್ಲ. ಆದರೆ, ಕೇಂದ್ರ ಸರ್ಕಾರದ ಮತ್ತು ತಮಿಳುನಾಡು, ಪಶ್ಚಿಮ ಬಂಗಾಳ ಅಥವಾ ಯಾವುದೇ ರಾಜ್ಯ ಸರ್ಕಾರದೊಂದಿಗೆ ನಮ್ಮ ಸಹಕಾರ ಸಂಬಂಧ ಚೆನ್ನಾಗಿಯೇ ಇರುತ್ತದೆ ಎಂದರು.
ನಮ್ಮ ಮುಂದೆ ಮೂರು ಪ್ರಮುಖ ಸವಾಲುಗಳಿವೆ. ಅವು ಜಾಗತಿಕ ಆರ್ಥಿಕ ಹಿನ್ನಡೆ, ಕೃಷಿ ಕ್ಷೇತ್ರದ ಸಮಸ್ಯೆಗಳು ಹಾಗೂ ದೇಶೀಯ ಬಂಡವಾಳ ಹೂಡಿಕೆಯಲ್ಲಿ ನೀರೀಕ್ಷಿತ ಮಟ್ಟದಲ್ಲಿಲ್ಲದಿರುವುದು. ಜಾಗತಿಕ ಆರ್ಥಿಕ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿಲ್ಲ. ಉಳಿದೆರಡನ್ನು ನಿಭಾಯಿಸುವ ವಿಶ್ವಾಸ ಇದೆ ಎಂದರು.