ನವದೆಹಲಿ/ತೆಲಂಗಾಣ : ದೇಶಕ್ಕೆ ಮುಂಗಾರು ಆಗಮಿಸಲು ದಿನಗಣನೆ ಆರಂಭವಾಗಿರುವಂತೆಯೇ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣವೊಂದರಲ್ಲೇ ಕಳೆದ ಮೂರು ದಿನಗಳಲ್ಲಿ ಬಿಸಿ ಗಾಳಿಯಿಂದಾಗಿ ಬರೋಬ್ಬರಿ 225 ಜನರು ಸಾವನ್ನಪ್ಪಿದ್ದಾರೆ.
ಈ ಎರಡೂ ರಾಜ್ಯಗಳಲ್ಲಿ ತಾಪಮಾನ 47 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದ್ದು, ಒಂದೇ ದಿನ 100 ಮಂದಿ ಸಾವನ್ನಪ್ಪಿದ್ದಾರೆ. 2002ರ ಮೇ 11ರಂದು ವಿಜಯವಾಡದಲ್ಲಿ 48.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಈ ಬಾರಿಯ ತಾಪಮಾನ ಆ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳು ಸಭೆ ನಡೆಸಿ, ಪರಿಸ್ಥಿತಿ ಪರಾಮರ್ಶೆ ನಡೆಸಿವೆ. ಹಗಲಿನ ಹೊತ್ತು ಯಾವುದೇ ಸುರಕ್ಷತೆ ಇಲ್ಲದೆ ಮನೆಯಿಂದ ಹೊರಗೆ ಬರಬಾರದು ಎಂದು ನಾಗರಿಕರಿಗೆ ಸೂಚನೆ ನೀಡಿವೆ.
ಈ ನಡುವೆ, ಒಡಿಶಾದಲ್ಲೂ ಉಷ್ಣ ಗಾಳಿಯ ಪ್ರತಾಪ ಹೆಚ್ಚಾಗಿದ್ದು, ಈವರೆಗೆ 23 ಮಂದಿ ಸಾವನ್ನಪ್ಪಿದ್ದಾರೆ. ಹಗಲಿನ ವೇಳೆ ಜನಸಂಚಾರ ವಿರಳವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಸಿಲಿನ ಕಾರಣಕ್ಕೆ ಓರ್ವ ಬಲಿಯಾಗಿದ್ದಾನೆ. ಪಂಜಾಬ್, ಹರ್ಯಾಣದಲ್ಲೂ ಉಷ್ಣಾಂಶದಿಂದಾಗಿ ಜನರು ಬವಣೆ ಪಡುವಂತಾಗಿದೆ.