ನವದೆಹಲಿ : ಕೇಂದ್ರ ಎನ್.ಡಿ.ಎ ಸರ್ಕಾರ ಮೇ 26ರಂದು1 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂತ್ರಿಮಂಡಲದ ಪ್ರಮುಖ ಸಹೋದ್ಯೋಗಿಗಳ ಜತೆ ಚರ್ಚೆ ನಡೆಸಿದರು. ಸಭೆಯಲ್ಲಿ, ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಬೇಕಾದ ರೀತಿಯ ಬಗ್ಗೆ ಮಾತುಕತೆ ನಡೆಸಲಾಯಿತು.
ಸರ್ಕಾರಕ್ಕೆ 1 ವರ್ಷ ತುಂಬಿದ ಸಂಭ್ರಮಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಿಜೆಪಿ, ಸರ್ಕಾರದ 1 ವರ್ಷದ ಸಾಧನೆಯನ್ನು, ಯುಪಿಎ ಸರ್ಕಾರದ 10 ವರ್ಷಗಳ ಸಾಧನೆಗೆ ಹೋಲಿಸುವ ಮೂಲಕ ಪ್ರಮುಖ ವಿಪಕ್ಷಕ್ಕೆ ಟಾಂಗ್ ನೀಡಲೂ ನಿರ್ಧರಿಸಿದೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ಒಂದು ವರ್ಷ ತುಂಬಲಿದೆ. ಆದರೆ ಮೇ 25ರಂದೇ ಜನಸಂಘದ ನಾಯಕ ದೀನ್ದಯಾಳ್ ಉಪಾಧ್ಯಾಯ ಜನ್ಮಸ್ಥಾನವಾದ ಉತ್ತರಪ್ರದೇಶದ ಮಥುರಾ ಜಿಲ್ಲೆಯ ನಾಗ್ಲಾ ಚಂದ್ರಬಾನ್ ಎಂಬಲ್ಲಿ ಒಂದು ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.
ಬಳಿಕ ಮುಂದಿನ ಒಂದು ವಾರ ದೇಶಾದ್ಯಂತ ಪತ್ರಿಕಾಗೋಷ್ಠಿಗಳು, ಜಾಥಾಗಳ ಮೂಲಕ ಜನರನ್ನು ತಲುಪುವ ಕೆಲಸಕ್ಕೆ ಬಿಜೆಪಿ ನಿರ್ಧರಿಸಿದೆ. ಮೂಲಗಳ ಪ್ರಕಾರ ಮೇ 26ರಿಂದ ದೇಶಾದ್ಯಂತ 250 ರ್ಯಾಲಿ ಮತ್ತು 500 ಸುದ್ಧಿಗೋಷ್ಠಿಗಳನ್ನು ನಡೆಸಲು ಬಿಜೆಪಿ ನಿರ್ಧರಿಸಿದೆ.
ಇದೇ ವೇಳೆ ಸರ್ಕಾರದ ಸಾಧನೆ ಬಿಂಬಿಸುವ ಜತೆಗೆ, ಯುಪಿಎಗೆ ಟಾಂಗ್ ನೀಡಲು "ವರ್ಷ್ ಏಕ್, ಕಾಮ್ ಅನೇಕ್', "ಮೋದಿ ಸರಕಾರ್, ಕಾಮ್ ಲಗಾತಾರ್', "ಬಿಜೆಪಿಯ 1 ವರ್ಷ, ಯುಪಿಎಯ 10 ವರ್ಷ' ಎಂಬ ಘೋಷಣೆಗಳನ್ನು ಚಾಲ್ತಿಗೆ ತರಲು ಬಿಜೆಪಿ ನಿರ್ಧರಿಸಿದೆ.
ಅಲ್ಲದೇ ಸರ್ಕಾರಕ್ಕೆ 1 ವರ್ಷ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಿಗೆ ಏನು ಕೊಡುಗೆ ನೀಡಲಾಗಿದೆ ಎಂಬುದನ್ನು ಬಹಿರಂಗವಾಗಿ ಸಚಿವರು, ಬಿಜೆಪಿ ಸಂಸದರು, ಪಕ್ಷದ ಮುಖಂಡರು ಸಾರಿ ಹೇಳಬೇಕು ಎಂದು ಸಭೆಯಲ್ಲಿ ಮೋದಿ ಸೂಚಿಸಿದರು ಎಂದು ಹೇಳಲಾಗಿದೆ.