ಮಂಗೋಲಿಯಾ : ಇತ್ತೀಚೆಗೆ ಭಯೋತ್ಪಾದಕತೆ ಮನುಕುಲಕ್ಕೆ ಮಾರಕವಾಗಿದೆ. ಮಾನವೀಯತೆಗೇ ಸವಾಲಾಗಿ ವಿಜೃಂಭಿಸುತ್ತಿದೆ. ಇದನ್ನು ನಿಗ್ರಹಿಸಲು ಅಂತಾರಾಷ್ಟ್ರೀಯ ಸಮುದಾಯ ಒಮ್ಮತದಿಂದ ಹೋರಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಚೀನಾ ಪ್ರವಾಸದ ಬಳಿಕ ಮಂಗೋಲಿಯಾಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರೊಂದಿಗೆ ಮಂಗೋಲಿಯಾ ಪ್ರಧಾನಿ ಚಿಮ್ಡ್ ಶೈಖಾನ್ ಬಿಲೇಗ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿ ದ್ವಂದ್ವ ನಿಲುವು ತಳೆಯಲಾಗಿದೆ ಎಂದು ಅಂತಾರಾಷ್ಟ್ರೀಯ ಸಮುದಾಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಭಾರತ ಮತ್ತು ಮಂಗೋಲಿಯಾ, ಇತ್ತೀಚೆಗೆ ಈ ಪ್ರಾಂತ್ಯ ಭಯೋತ್ಪಾದಕರ ಆಶ್ರಯತಾಣ ಮತ್ತು ಸ್ವರ್ಗ ಆಗುತ್ತಿದ್ದು, ಈ ಕೂಡಲೇ ಉಗ್ರರನ್ನು ಇಲ್ಲಿಂದ ಹೊರಹಾಕುವ ಕೆಲಸ ಆಗಬೇಕಾಗಿದೆ ಎಂದು ಆಗ್ರಹಿಸಿವೆ.
ಪ್ರಧಾನಿ ಚಿಮ್ಡ್ ಶೈಖಾನ್ ಬಿಲೇಗ್ ಅವರೊಂದಿಗೆ ಮಾತುಕತೆ ನಡೆಸಿದ ವೇಳೆ ಇಬ್ಬರೂ ನಾಯಕರು ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಭಯೋತ್ಪಾದಕತೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು. ಇತ್ತೀಚೆಗೆ ಭಯೋತ್ಪಾದಕತೆ ಮನುಕುಲಕ್ಕೆ ಮಾರಕವಾಗಿದೆ. ಮಾನವೀಯತೆಗೇ ಸವಾಲಾಗಿ ವಿಜೃಂಭಿಸುತ್ತಿದೆ. ಭಯೋತ್ಪಾದನೆ ನಿಗ್ರಹಿಸಲು ಅಂತಾರಾಷ್ಟ್ರೀಯ ಸಮುದಾಯ ಒಮ್ಮತದಿಂದ ಹೋರಾಡಬೇಕಾಗಿದೆ. ಆದರೆ ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿರುವುದು ವಿಷಾದನೀಯ ಮತ್ತು ಅಪಾಯಕಾರಿಯಾಗಿದೆ ಎಂದು ಮೋದಿ ತಿಳಿಸಿದರು.
ಗಡಿ ರಕ್ಷಣೆ ಸೇರಿದಂತೆ ಹಲವು ಒಡಂಬಡಿಕೆಗಳಿಗೆ ಸಹಿ ಹಾಕಿದ ಉಭಯ ನಾಯಕರು, ಇಂಧನ ಉತ್ಪಾದನೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಏಕಾಭಿಪ್ರಾಯ ವ್ಯಕ್ತಪಡಿಸಿದರು.