ಬೀಜಿಂಗ್ : 'ನಾಥು ಲಾ ಮೂಲಕ ಕೈಲಾಸ ಮಾನಸ ಸರೋವರಕ್ಕೆ ಎರಡನೇ ಮಾರ್ಗ ಜೂನ್ ತಿಂಗಳಿನಿಂದ ಭಾರತೀಯ ಯಾತ್ರಿಗಳಿಗೆ ಲಭ್ಯವಾಗಲಿದೆ. ನಾನು ಚೀನಾವನ್ನು ಇದಕ್ಕಾಗಿ ಅಭಿನಂದಿಸುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಈ ಬಹು ನಿರೀಕ್ಷಿತ ಪ್ರಕಟಣೆಯನ್ನು ಮಾಡಿದ್ದಾರೆ. ಇದರಿಂದಾಗಿ ಇನ್ನಷ್ಟು ಭಾರತೀಯರಿಗೆ ಕೈಲಾಸ ಯಾತ್ರೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಚೀನಾದೊಂದಿಗೆ 24 ಒಪ್ಪಂದಗಳಿಗೆ ಶುಕ್ರವಾರ ಸಹಿ ಹಾಕಿದ ನಂತರ ಮಾತನಾಡಿದ ಪ್ರಧಾನಿ, ಕೈಲಾಸ ತಲುಪಲು ಹೊಸ ಮಾರ್ಗೆ ಇದೇ ಜೂನ್ ತಿಂಗಳಿನಿಂದ ಯಾತ್ರಿಗಳಿಗೆ ಲಭ್ಯವಾಗಲಿದೆ ಎಂದರು.
ಹಿಮಾಲಯದ ನಾಥು ಲಾ ಪಾಸ್ ನಿಂದ ಸಾಗುವ ಈ ಎರಡನೇ ಮಾರ್ಗ ಸಮುದ್ರ ಮಟ್ಟದಿಂದ 4,000 ಮೀಟರ್ ಎತ್ತರದಲ್ಲಿದೆ. ಈವರೆಗೆ ಉತ್ತರಾಖಾಂಡದ ಲಿಪುಲೇಖ್ ಪಾಸ್ ಮಾರ್ಗವಾಗಿ ಕೈಲಾಸ ಮಾನಸ ಸರೋವರಕ್ಕೆ ಯಾತ್ರಾರ್ಥಿಗಳು ತೆರಳಬೇಕಾಗಿತ್ತು. ಜೂನ್ 2013ರ ಭೀಕರ ಜಲಪ್ರಳಯದಿಂದ ಲಿಪುಲೇಖ್ ರಸ್ತೆ ಸಾಕಷ್ಟು ಹಾನಿಗೊಳಗಾಗಿತ್ತು.
ನಾಥು ಲಾ ಪಾಸ್ ಮೂಲಕ ಸಾಗುವ ಹೊಸ ರಸ್ತೆಯು ಉತ್ತಮ ಸೌಲಭ್ಯಗಳನ್ನು ಹೊಂದಿದ್ದು, ಬಸ್, ಕಾರುಗಳಲ್ಲಿ ಸಹ ಪ್ರಯಾಣಿಸಬಹುದಾಗಿದೆ. ಆದರೂ ಹಿಮಾಲಯ ವಲಯದಲ್ಲಿ ಆಮ್ಲಜನಕದ ಕೊರತೆ ಯಾತ್ರಿಗಳಿಗೆ ಒಂದು ಸವಾಲಾಗಿಯೇ ಉಳಿದಿದೆ.
ಭಾರತದ ವಿದೇಶಾಂಗ ಸಚಿವಾಲಯ ಪ್ರತಿ ವರ್ಷ 1,000 ಯಾತ್ರಿಗಳನ್ನು 18 ತಂಡಗಳಲ್ಲಿ ಕರೆದೊಯ್ಯುತ್ತಿದೆ. ಈ ಯಾತ್ರೆ ಪೂರೈಸಲು 22 ದಿನಗಳ ಕಾಲ ತಗಲುತ್ತದೆ. ಹೊಸ ಮಾರ್ಗದ ಮೂಲಕ ಯಾತ್ರೆ ಸುಗಮವಾಗಲಿದ್ದು, ಮುಂದಿನ ದಿನಗಳಲ್ಲಿ ಯಾತ್ರಿಗಳ ಸಂಖ್ಯೆ ಸಾಕಷ್ಟು ವೃದ್ಧಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಟಿಬೆಟ್ ನಲ್ಲಿರುವ ಕೈಲಾಸ ಮಾನಸ ಸರೋವರಕ್ಕೆ ಸಿಕ್ಕಿಂ ನ ನಾಥು ಲಾ ದಿಂದ ಹೊಸ ಮಾರ್ಗವನ್ನು ಆರಂಭಿಸಲು ಅಗತ್ಯವಾದ ವಿಧಿವಿಧಾನಗಳನ್ನು ಕಳೆದ ಫೆಬ್ರವರಿಯಲ್ಲಿ ಚೀನಾಕ್ಕೆ ಭೇಟಿ ಇತ್ತ ಸಂದರ್ಭದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಚೀನಾ ಸರಕಾರದೊಂದಿಗೆ ಮಾತುಕತೆ ನಡೆಸಿ ಅಂತಿಮಗೊಳಿಸಿದ್ದರು.
2014 ಸಪ್ಟಂಬರದಲ್ಲಿ ಭಾರತಕ್ಕೆ ಭೇಟಿ ಇತ್ತ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಪ್ರಧಾನಿ ಮೋದಿ ಅವರಿಗೆ ಹೊಸ ಮಾರ್ಗವನ್ನು ತೆರೆಯುವ ಆಶ್ವಾಸನೆ ಕೊಟ್ಟಿದ್ದರು. ಈ ನಿಟ್ಟಿನಲ್ಲಿ ಉಭಯ ದೇಶಗಳೂ ಒಂದಾಗಿ ಕೆಲಸ ಮಾಡುವ ಹಾಗೂ ಯಾತ್ರಿಗಳಿಗೆ ಸುಗಮವಾದ ಪ್ರಯಾಣಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸುವ ನಿರ್ಧಾರ ಕೈಗೊಂಡಿದ್ದವು.
ಇದಕ್ಕೂ ಮೊದಲು ಬ್ರಜಿಲ್ ನಲ್ಲಿ ನಡೆದ ಬ್ರಿಕ್ಸ್ ದೇಶಗಳ ಸಮಾವೇಶದಲ್ಲಿ ಚೀನಾ ಅಧ್ಯಕ್ಷರ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ, ನಾಥು ಲಾ ಮೂಲಕ ಕೈಲಾಸ ಮಾನಸ ಸರೋವರಕ್ಕೆ ಭಾರತೀಯ ಯಾತ್ರಿಗಳಿಗೆ ರಸ್ತೆಯನ್ನು ತೆರೆಯಬೇಕೆಂದು ಬಲವಾಗಿ ಆಗ್ರಹಿಸಿದ್ದರು.