ಬೀಜಿಂಗ್ : ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಬೀಜಿಂಗ್ ನ ಶಿನ್ ಗುವಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತ, ನಿಮ್ಮಲ್ಲಿ ವಿಶ್ವದರ್ಜೆಯ ಸಂಸ್ಥೆಗಳಿವೆ.
ಅಷ್ಟೇ ಅಲ್ಲ, ಚೀನಾದಲ್ಲಿ ಆರ್ಥಿಕ ಪವಾಡ ನಡೆಸಿ ಉಳಿದ ದೇಶಗಳಿಗೂ ಮಾದರಿಯಾಗಿದ್ದೀರಿ. ಅಧ್ಯಕ್ಷ ಕ್ಸಿ ಜಿಂಪಿಂಗ್ ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳನ್ನು ವಿಶ್ವಕ್ಕೆ ಕೊಟ್ಟಿದ್ದೀರಿ ಎಂದು ಮೋದಿ ಚೀನಾವನ್ನು ಕೊಂಡಾಡಿದರು.
ಭಾರತ ಮತ್ತು ಚೀನಾ ಬದಲಾಗುತ್ತಿರುವ ದೇಶಗಳಾಗಿವೆ. ಆರ್ಥಿಕ ಕ್ರಾಂತಿಯ ಮುಂದಿನ ದೇಶ ಭಾರತ. ಆರ್ಥಿಕವಾಗಿ ನಾವು ಸಾಕಷ್ಟು ಬದಲಾಗಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಚೀನಾ ಜೊತೆ ಹೆಜ್ಜೆ ಹಾಕಲು ಭಾರತ ಉತ್ಸುಕವಾಗಿದೆ. ಶಿಕ್ಷಣ ಎನ್ನುವುದು ಸಂಪತ್ತು ಇದ್ದಂತೆ. ಶಿಕ್ಷಣ ಕೊಡು ಕೊಳ್ಳುವಿಕೆಯನ್ನು ಹೆಚ್ಚು ಮಾಡುತ್ತದೆ ಎಂದರು. ಸಂಶೋಧನೆಯಲ್ಲಿ ಚೀನಾದ ಸಾಧನೆ ಅಭೂತಪೂರ್ವವಾದದ್ದು. ಭಾರತ ಮತ್ತು ಚೀನಾಗಳು ಒಂದೇ ತೆರನಾದ ಸವಾಲುಗಳನ್ನು ಎದುರಿಸುತ್ತಿವೆ. ಎಲ್ಲರ ಸಹಕಾರದ ಜೊತೆ ಭಾರತ ವೇಗವಾಗಿ ಅಭಿವೃದ್ಧಿ ಹೊಂದಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಭಾರತದ ವಿವಾದಿತ ಭೂಸ್ವಾಧೀನ ಕಾಯ್ದೆ ಬಗ್ಗೆ ಪ್ರಸ್ತಾಪಿಸಿ, ಭೂಸ್ವಾಧೀನ ಕಾಯ್ದೆಯಿಂದ ದೇಶದ ಅಭಿವೃದ್ಧಿಗೆ ತೊಂದರೆಯಾಗುವುದಿಲ್ಲ. ಈ ಕಾಯ್ದೆ ರೈತರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ರೈತರ ಅಭಿವೃದ್ಧಿಗೆ ಭಾರತ ಸರಕಾರ ಕಟಿಬದ್ಧವಾಗಿದೆ ಎಂದು ಹೇಳಿದರು.
ಈ ಮಧ್ಯೆ ಪಾಕಿಸ್ತಾನದ ಬಗ್ಗೆ ಪರೋಕ್ಷವಾಗಿ ಪ್ರಸ್ತಾವಿಸಿ, ಯಾರಿಗೂ ನಮ್ಮ ಅಭಿವೃದ್ದಿಯನ್ನು ತಡೆದು ನಿಲ್ಲಿಸುವ ಶಕ್ತಿ ಇಲ್ಲ. ವಿಧ್ವಂಸಕ ಕೃತ್ಯಗಳ ಮೂಲಕ ನಡೆಸುವ ದುಷ್ಕೃತ್ಯ ಎದುರಿಸುವ ಶಕ್ತಿ ಭಾರತಕ್ಕಿದೆ ಎಂದು ಮೋದಿ ಪಾಕಿಸ್ತಾನದ ಹೆಸರು ಹೇಳದೆ ಪರೋಕ್ಷವಾಗಿ ಟೀಕಿಸಿದರು.