ಬೆಂಗಳೂರು : ವೃತ್ತಿಪರ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕಾಗಿ ಮಂಗಳವಾರದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ರಾಜ್ಯಾದ್ಯಂತ ಈ ಬಾರಿ 343 ಪರೀಕ್ಷಾ ಕೇಂದ್ರಗಳಲ್ಲಿ 1,57,580 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲೇ 73 ಕೇಂದ್ರಗಳಿದ್ದು, 38,787 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಳೆದ ವರ್ಷಕ್ಕಿಂತ ಅಭ್ಯರ್ಥಿಗಳ ಸಂಖ್ಯೆ ಸುಮಾರು 20 ಸಾವಿರ ಹೆಚ್ಚಿದೆ. ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಇಲ್ಲ ಎಂದು ಪ್ರಾಧಿಕಾರ ತಿಳಿಸಿದೆ.
ಬಿಎಸ್ಸಿ ಕೃಷಿ ಪದವಿ ಪ್ರವೇಶಕ್ಕೆ ಇದ್ದ ಕೃಷಿ ಕೋಟಾ ಪ್ರಮಾಣ ಹೆಚ್ಚಿಸಿದ್ದರಿಂದ ಪರೀಕ್ಷಾರ್ಥಿಗಳು ಕೊನೆ ಕ್ಷಣದವರೆಗೂ ಈ ಕೋಟಾಕ್ಕೆ ಮುಗಿಬಿದ್ದರು. ಇದರಡಿ ಅಭ್ಯರ್ಥಿಗಳ ಸಂಖ್ಯೆ ಏರಿಕೆಯಾದ ಹಿನ್ನೆಲೆಯಲ್ಲಿ ಕೃಷಿ ವಿಶ್ವವಿದ್ಯಾಲಯವು ಈ ಕೋಟಾದಡಿ ಬರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ವಿಧಿಸಿದ್ದ ಕೊನೆಯ ದಿನಾಂಕವನ್ನು ಮೇ 15ರವರೆಗೆ ವಿಸ್ತರಿಸಿದೆ.
ಪರೀಕ್ಷೆಯ ಹಿಂದಿನ ದಿನವಾದ ಸೋಮವಾರ ಮಧ್ಯಾಹ್ನದವರೆಗೂ ಅಭ್ಯರ್ಥಿಗಳು ತಾವು ಸಲ್ಲಿಸಿದ್ದ ಅರ್ಜಿಯಲ್ಲಿ "ಕೃಷಿ ಕೋಟಾ' ಎಂದು ಬದಲಾವಣೆ ಮಾಡಿಕೊಂಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಲ್ಲೇ 200ಕ್ಕೂ ಅಧಿಕ ಈ ಬದಲಾವಣೆ ಆಗಿದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಎನ್. ಗಂಗಾಧರಯ್ಯ ತಿಳಿಸಿದ್ದಾರೆ.
ಕೃಷಿ ಕೋಟಾ ಈ ಮೊದಲು ಶೇ.23.8 ಇತ್ತು. ಈಗ ಅದು ಶೇ.40ಕ್ಕೆ ಏರಿದೆ. ಈ ಮಧ್ಯೆ ಕೃಷಿ ಕೋಟಾ ಎಂದು ನಮೂದಿಸದವರಿಗೆ ಪ್ರಾಯೋಗಿಕ ಪರೀಕ್ಷೆ ಇರುವುದಿಲ್ಲ. ಆದರೆ, ಕೆಲ ಸಾಮಾನ್ಯ ವಿದ್ಯಾರ್ಥಿಗಳು ನಂತರದಲ್ಲಿ ಕೃಷಿ ಕೋಟಾ ಎಂದು ಬದಲಾಯಿಸಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಆತಂಕ ಮತ್ತು ಗೊಂದಲ ಬೇಡ ಎಂದು ಪ್ರಾಧಿಕಾರ ಕೂಡ ಸಿಇಟಿ ಹಿಂದಿನ ದಿನದವರೆಗೂ ಬದಲಾವಣೆಗೆ ಅವಕಾಶ ಕಲ್ಪಿಸಿತ್ತು. ಮೇ 16ಕ್ಕೆ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ ಎಂದರು.
ಪರೀಕ್ಷೆ ಬರೆಯಲಿರುವ ಒಟ್ಟಾರೆ ಅಭ್ಯರ್ಥಿಗಳಲ್ಲಿ 82,079 ವಿದ್ಯಾರ್ಥಿಗಳು ಹಾಗೂ 75,501 ವಿದ್ಯಾರ್ಥಿನಿಯರು ಇದ್ದಾರೆ. ಮೇ 26ಕ್ಕೆ ಸಿಇಟಿ ಫಲಿತಾಂಶ ಪ್ರಕಟಿಸಲಾಗುವುದು. ಈ ಪೈಕಿ 2,219 ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿದ್ದು, ನಗರದ 58 ಪರೀಕ್ಷಾ ಕೇಂದ್ರಗಳಲ್ಲೇ ಕನ್ನಡ ಭಾಷಾ ಪರೀಕ್ಷೆ ಸೇರಿದಂತೆ ಸಿಇಟಿ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಹಿಂದೆ ಎಲ್ಲ ಅಭ್ಯರ್ಥಿಗಳು ಒಂದೇ ಕೇಂದ್ರದಲ್ಲಿ ಕನ್ನಡ ಭಾಷಾ ಪರೀಕ್ಷೆ ಬರೆಯುವ ವ್ಯವಸ್ಥೆ ಇತ್ತು. ಈ ಸಲ ಆಯಾ ಪರೀಕ್ಷಾ ಕೇಂದ್ರಗಳಲ್ಲೇ ಮೇ 13 ರಂದು ಸಂಜೆ 4.45 ರಿಂದ 5.45ರವರೆಗೆ ಕನ್ನಡ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.