ಗುವಾಹಟಿ: : ಗ್ರಾಮ ವಿಕಾಸದ ಧ್ಯೇಯದೊಂದಿಗೆ ಕಾಲ್ನಡಿಗೆಯ ಮೂಲಕ ದೇಶಾದ್ಯಂತ ಸಂಚರಿಸುತ್ತಿರುವ ಆರ್.ಎಸ್.ಎಸ್ ಮಾಜಿ ಅಖೀಲ ಭಾರತೀಯ ಸೇವಾ ಪ್ರಮುಖ್ ಸೀತಾರಾಮ ಕೆದಿಲಾಯ ನೇತೃತ್ವದ ಭಾರತ ಪರಿಕ್ರಮ ಯಾತ್ರೆ ಇದೀಗ ಒಂದು ಸಾವಿರ ದಿನಕ್ಕೆ ಪ್ರವೇಶಿಸಿದೆ.
2009ರ ಆಗಸ್ಟ್ 9ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ ಯಾತ್ರೆಯು ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ ಸಂಚರಿಸಿ ಮೇ 5ರಂದು ಅಸ್ಸಾಂನ ಗುವಾಹಟಿ ಬಳಿಯ ತೇಜಪುರಕ್ಕೆ ಪ್ರವೇಶಿಸಿದ್ದು ಯಾತ್ರೆಯ ಸಾವಿರನೇ ದಿನವನ್ನು ಪೂರೈಸಿದೆ.
67ರ ಹರೆಯದ ಸೀತಾರಾಮ ಕೆದಿಲಾಯ ಅವರನ್ನು ಆರ್.ಎಸ್.ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅಭಿನಂದಿಸಿದ್ದಾರೆ. ಸಮಾಜ ಜಾಗೃತಿ ಮೂಡಿಸುವ ಉದ್ದೇಶದ ಪರಿವ್ರಾಜಕ ಪರಂಪರೆಯ ಪ್ರೇರಣೆ ಪಡೆದು ಸೀತಾರಾಮ ಕೆದಿಲಾಯ ಅವರು ನಡೆಸುತ್ತಿರುವ ಭಾರತ ಪರಿಕ್ರಮ ಯಾತ್ರೆ ಒಂದು ಸಹಸ್ರ ದಿನಗಳನ್ನು ಪೂರೈಸಿರುವುದು ಅಭಿನಂದನೀಯ ಕಾರ್ಯವಾಗಿದೆ. ಅವರು ಭಾರತದ ಪೂರ್ವ ಮತ್ತು ನೈಋತ್ಯ ಪ್ರದೇಶಗಳಲ್ಲಿ ನಡೆಯುತ್ತ ಈ ಪ್ರದಕ್ಷಿಣೆಯನ್ನು ಯಶಸ್ವಿಯಾಗಿ ಪೂರೈಸುವುದರಲ್ಲಿ ಯಾರಿಗೂ ಅನುಮಾನವಿಲ್ಲ ಎಂದು ಭಾಗವತ್ ಹೇಳಿದ್ದಾರೆ.
ಯಾತ್ರೆಯಲ್ಲಿ ಅವರು ಗ್ರಾಮಸ್ಥರೊಂದಿಗೆ ಬೆರತುಕೊಂಡು ಭಾರತದ ಪುಣ್ಯ ಸನಾತನ ಮತ್ತು ನಿತ್ಯನೂತನ ಸಂಸ್ಕೃತಿಯ ಪ್ರಕಾರ ಇಂದಿನ ಪರಿಸ್ಥಿತಿಯಲ್ಲಿ ಗೋವು, ಗ್ರಾಮ ಮತ್ತು ಪ್ರಕೃತಿ ಆಧಾರಿತ ಜೀವನ ನಡೆಸುವ ಬಗೆ ಹೇಗೆಂದು ಮಾತ್ರ ಉಪದೇಶ ನೀಡದೆ, ಗ್ರಾಮಗಳಲ್ಲಿ ಸತ್ಯಾಧಾರಿತ ಹಾಗೂ ಸಾತ್ವಿಕ ಧರ್ಮ ಜೀವನದ ಆಚರಣೆಗೆ ಚಾಲನೆಯನ್ನೂ ನೀಡಿದ್ದಾರೆ. ಭಾರತೀಯ ಸಮಾಜ ಮತ್ತು ಸ್ವನಿರ್ಮಿತ ಸಮಸ್ಯೆಗಳಿಗೆ ಸಿಲುಕಿರುವ ಮಾನವತೆಗೆ ಇದೊಂದು ಬಹು ಸಮಯೋಚಿತ ಮತ್ತು ಉಪಯುಕ್ತ ಕಾರ್ಯವಾಗಿದೆ. ಬಹುಜನ ಹಿತಾಯದ ಸಂದೇಶವನ್ನು ಸ್ವಂತ ಆಚರಣೆಯಿಂದ ನೂರುಪಟ್ಟು ಪ್ರಚಾರ ಮತ್ತು ಪ್ರಸಾರ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.